ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿ, ದುಬಾರಿ ಚಿತ್ರ ಕಲಾಕೃತಿಗಳು, ಶಿಲ್ಪಗಳು, ಕೈ ಗಡಿಯಾರಗಳು ಕೂಡ ಇನ್ನು ಮುಂದೆ ಸಂಪತ್ತು ತೆರಿಗೆ ವ್ಯಾಪ್ತಿಯಲ್ಲಿ ಬರುವ ಸಾಧ್ಯತೆ ಇದೆ.
ಕಪ್ಪು ಹಣ ನಿಗ್ರಹ ಹಿನ್ನೆಲೆಯಲ್ಲಿ ಸರ್ಕಾರ, ಸಂಪತ್ತು ತೆರಿಗೆ ವ್ಯಾಪ್ತಿ ವಿಸ್ತರಿಸಲು ಚಿಂತಿಸುತ್ತಿದೆ. ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಭಾಗವಾಗಿ ಇದು ಜಾರಿಗೆ ಬರಲಿದೆ. ಹೊಸ ನೀತಿಯಡಿ ಸಂಪತ್ತು ತೆರಿಗೆ ಗರಿಷ್ಠ ಮಿತಿಯನ್ನು ರೂ 30 ಲಕ್ಷದಿಂದ ರೂ 1 ಕೋಟಿಗೆ ಹೆಚ್ಚಿಸಲಾಗಿದೆ.
ಇದರಿಂದ ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿ, ದುಬಾರಿ ಕಾರು, ಹೆಲಿಕಾಫ್ಟರ್,ಚಿನ್ನಾಭರಣಗಳು, ಪುರಾತತ್ವ ಸಂಗ್ರಹಗಳು ಕೂಡ ತೆರಿಗೆ ವ್ಯಾಪ್ತಿಗೆ ಬರಲಿವೆ. ್ಙ50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಕೈ ಗಡಿಯಾರ, ಮತ್ತು ರೂ 2 ಲಕ್ಷಕ್ಕಿಂತ ಹೆಚ್ಚು ನಗದು ಹೊಂದಿದ್ದರೆ ಕೂಡ ಸಂಪತ್ತು ತೆರಿಗೆ ಪಾವತಿಸಬೇಕಾಗುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ರಿಯಲ್ ಎಸ್ಟೇಟ್ ಹಿತಾಸಕ್ತಿ ದೃಷ್ಟಿಯಿಂದ ವಸತಿ ಕಟ್ಟಡಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಬಾಡಿಗೆಗೆ ಕೊಟ್ಟಿರುವ ಸ್ಥಿರಾಸ್ತಿಗಳಿಗೆ ಸಂಪತ್ತು ತೆರಿಗೆ ವಿನಾಯ್ತಿ ಕಲ್ಪಿಸಲಾಗಿದೆ.