ತಿರುವಂನತಪುರ (ಪಿಟಿಐ): ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿಯ ವಜ್ರ ವೈಢೂರ್ಯ ಮತ್ತು ಇತರ ಸಂತ್ತುಗಳ ಪಟ್ಟಿ ಮಾಡಿ ವೈಜ್ಞಾನಿಕವಾಗಿ ದಾಖಲೀಕರಿಸಲು ಸುಪ್ರೀಂಕೋರ್ಟ್ ನೇಮಕ ಮಾಡಿರುವ ತಜ್ಞರ ಸಮಿತಿಯು ಸೋಮವಾರ ತನ್ನ ಕಾರ್ಯ ಆರಂಭ ಮಾಡಿದೆ.
ಡಾ. ಎಂ. ವಿ ನಾಯರ್ ನೇತೃತ್ವದ ತಜ್ಞರ ಸಮಿತಿಯು ರಾಜ್ಯ ಒಡೆತನದ ಕೆಲ್ಟ್ರೊನ್ ಸಂಸ್ಥೆಯು ಒದಗಿಸಿರುವ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಸಂಪತ್ತುಗಳ ದಾಖಲೀಕರಣ ಕಾರ್ಯವನ್ನು ಆರಂಭಿಸಿದೆ.
ಮೊದಲಿಗೆ ಎರಡು ನೆಲ ಮಾಳಿಗೆಯಲ್ಲಿರುವ ಬೆಳ್ಳಿ ಆಭರಣಗಳು ಮತ್ತು ಹಿತ್ತಾಳೆ ಪಾತ್ರೆಗಳ ದಾಖಲೀಕರಣ ನಡೆಯಲಿದೆ. ಹೈಕೋರ್ಟ್ನ ಮಾಜಿ ನ್ಯಾಯಮೂರ್ತಿ ಎಂ. ಎನ್. ಕೃಷ್ಣನ್ ನೇತೃತ್ವದ ದೇವಸ್ಥಾನ ಸಂಪತ್ತು ಸಮಿತಿಯ ಉಸ್ತುವಾರಿಯಲ್ಲಿ ಈ ಕಾರ್ಯ ನಡೆಯಲಿದೆ.
ಈ ಉಸ್ತುವಾರಿ ಸಮಿತಿಯು ಆರು ನೆಲಮಾಳಿಗೆಗಳ ಪೈಕಿ ನಾಲ್ಕನ್ನು ಕಳೆದ ವರ್ಷ ತೆರೆದಾಗ ಕೋಟ್ಯಂತರ ರೂಪಾಯಿಗಳ ಮೌಲ್ಯದ ವಜ್ರ, ವೈಢೂರ್ಯ, ಚಿನ್ನ, ಬೆಳ್ಳಿ ಪತ್ತೆಯಾಗಿದ್ದರಿಂದ ಪದ್ಮನಾಭಸ್ವಾಮಿ ದೇವಸ್ಥಾನವು ಜಗತ್ತಿನ ಗಮನ ಸೆಳೆಯಿತು.