‘ನಕ್ಷತ್ರ’ (1960), ‘ಸಂಕ್ರಾಂತಿ’ (1965) ಎನ್ನುವ ಎರಡು ಕವನ ಸಂಕಲನಗಳನ್ನು ಪ್ರಕಟಿಸಿರುವ ಧಾರವಾಡದ ಪ್ರೊ.ಆರ್.ವ್ಹಿ.ಹೊರಡಿ ನಲವತ್ತೈದು ವರ್ಷಗಳ ನಂತರ ತಮ್ಮ ಮೂರನೇ ಸಂಕಲನ ‘ಸಂಪ್ರಿಯಾ’ ಪ್ರಕಟಿಸಿದ್ದಾರೆ. ಈ ಸಂಕಲನದ ಇಪ್ಪತ್ತೊಂಬತ್ತು ಕವಿತೆಗಳು ಹಾಗೂ ಐವತ್ತೆಂಟು ಹನಿಗವಿತೆಗಳ ವಸ್ತು ಹಾಗೂ ಶಿಲ್ಪವನ್ನು ನೋಡಿದರೆ, ಕಳೆದ ನಾಲ್ಕೂವರೆ ದಶಕಗಳಲ್ಲಿ ಕನ್ನಡ ಕಾವ್ಯಲೋಕದಲ್ಲಿ ಹರಿದ ನೀರನ್ನು ಹೊರಡಿ ಅವರು ಗಮನಿಸಿಲ್ಲ ಅನ್ನಿಸುತ್ತದೆ. ಕೆಲವು ತುಣುಕುಗಳನ್ನು ನೋಡಿ:
‘ಹೆಸರು ಮೋಹನದಾಸ/ ಉಸಿರು ಭಾರತ ದೇಶ/ ಮನುಕುಲದ ಉನ್ನತಿಯೆ ಅವನ ಘನ ಉದ್ದೇಶ’
‘ನಮ್ಮದು ರಜಾಪ್ರಿಯರ/ ಪ್ರಜಾಪ್ರಭುತ್ವ! ವಿಧಾನ-/ ಸೌಧದಲಿ ಎಲ್ಲವೂ ನಿಧಾನ/ ‘ಆಗ ಬಾ, ಈಗ ಬಾ/ ಹೋಗಿ ಬಾ’ ಎಂದೆನುವ/ ಅಧಿಕಾರಿಗಳ ಅಧ್ವಾನ’‘ಈಗ ಈ ದೇಶದ ಮುಖ್ಯ/ ಕಸಬು- ಕೃಷಿಯಲ್ಲ!/ ಡೆಮಾಕ್ರಸಿಯ ಹೆಸರಲ್ಲಿ/ ಹುಲುಸಾಗಿ ಬೆಳೆದಿದೆ ಹಿಪಾಕ್ರಸಿ!/ ಪ್ರಜೆ ಪ್ರಭುವಲ್ಲ/ ಪರದೇಶಿ’
ಹೀಗೆ, ಪ್ರಾಸಬದ್ಧವಾಗಿ ಬರೆಯುವ ಕವಿ, ಒಂದೆಡೆ ಗಾಂಧಿತತ್ವಗಳನ್ನು ಆರಾಧಿಸುತ್ತ, ಇನ್ನೊಂದೆಡೆ ವ್ಯವಸ್ಥೆ ಕಲುಷಿತಗೊಳುತ್ತಿರುವ ಬಗೆಗೆ ಮರುಗುತ್ತಾರೆ. ಈ ಆರಾಧನೆ-ವಿಷಾದಗಳ ನಡುವೆ ಇರಬಹುದಾದ ಕಾವ್ಯವನ್ನು ದಕ್ಕಿಸಿಕೊಳ್ಳುವ ಪ್ರಯತ್ನಕ್ಕೆ ಹೊರಡಿ ಅವರು ಕೈಹಾಕಿಲ್ಲ.