ಬೆಂಗಳೂರು: ಇಟ್ಟಿಗೆ ಕಳವು ಮಾಡಿದ ವಿಷಯಕ್ಕೆ ಸಂಬಂಧಿಕರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಪರಪ್ಪನ ಅಗ್ರಹಾರ ಸಮೀಪದ ಶಾಂತಿಪುರದಲ್ಲಿ ಬುಧವಾರ ರಾತ್ರಿ ನಡೆದಿದೆ.
ಶಾಂತಿಪುರ ನಿವಾಸಿ ಪಾಪಯ್ಯ (35) ಸಾವನ್ನಪ್ಪಿದ್ದು, ವೆಂಕಟಸ್ವಾಮಿ ಎಂಬುವರು ಗಂಭೀರ ಗಾಯಗೊಂಡಿದ್ದಾರೆ. ಶಾಂತಿಪುರ ಸಮೀಪದ ಶಾಲೆ ಆವರಣದಲ್ಲಿ ಪಾಪಯ್ಯ ಅವರ ಸಂಬಂಧಿಯಾದ ದೊಡ್ಡಯ್ಯ ಇಟ್ಟಿಗೆಗಳನ್ನು ಇರಿಸಿದ್ದ.
ಅವುಗಳನ್ನು ಪಾಪಯ್ಯ ಹಾಗೂ ವೆಂಕಟಸ್ವಾಮಿ ಅವರು ಕಳವು ಮಾಡಿದ್ದಾರೆಂದು ದೊಡ್ಡಯ್ಯ ಅವರೊಂದಿಗೆ ಜಗಳ ಆರಂಭಿಸಿದ. ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ದೊಡ್ಡಯ್ಯ ಮಚ್ಚಿನಿಂದ ಇಬ್ಬರ ಮೇಲೆ ಹಲ್ಲೆ ನಡೆಸಿದ್ದಾನೆ.
ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಪಾಪಯ್ಯ ಸಾವನ್ನಪ್ಪಿದರು. ವೆಂಕಟಸ್ವಾಮಿ ಚಿಕಿತ್ಸೆ ಪಡೆಯುತ್ತಿದ್ದು, ದೊಡ್ಡಯ್ಯ ಪರಾರಿಯಾದ್ದಾನೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.