ಜೋಯಿಡಾ: ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಭಕ್ತರ ‘ಹರ ಹರ ಮಹಾದೇವ’ ಎನ್ನುವ ಜಯಕಾರದ ಮಧ್ಯೆ ತಾಲ್ಲೂಕಿನ ಉಳವಿಯ ಚನ್ನಬಸವೇಶ್ವರರ ರಥೋತ್ಸವ ಶುಕ್ರವಾರ ಸಂಭ್ರಮದಿಂದ ನಡೆಯಿತು.
ದೇವಸ್ಥಾನದ ಮಹಾದ್ವಾರದಿಂದ ಹೊರಟ ರಥ ದೇವಸ್ಥಾನದ ರಥಬೀದಿಯಲ್ಲಿ ವೀರಭದ್ರೇಶ್ವರ ದೇವಸ್ಥಾನದವರೆಗೆ ಸಾಗಿತು. ದಾರಿಮಧ್ಯದಲ್ಲಿ ಭಕ್ತರು ಉತ್ತತ್ತಿ, ಬಾಳೆಹಣ್ಣು ರಥಕ್ಕೆ ಎಸೆದರು. ಜನಜಂಗುಳಿಯ ಮಧ್ಯೆ ಉದ್ದನೆಯ ಸಾಲಿನಲ್ಲಿ ನಿಂತ ಭಕ್ತರು ತೆಂಗಿನ ಕಾಯಿ ಹಾಗೂ ಕಾಣಿಕೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಹುಬ್ಬಳ್ಳಿಯ ಶಿರಗುಪ್ಪಿ ಮನೆತನದವರು ಚನ್ನಬಸವಣ್ಣನ ಸೇವೆಗಾಗಿ ಅರ್ಪಿಸಿದ ಬೃಹತ್ ಗಾತ್ರದ ರುದ್ರಾಕ್ಷಿ ಮಾಲೆ ಭಕ್ತಾದಿಗಳ ಆಕರ್ಷಣೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.