ಹುಮನಾಬಾದ್: ಗಾಳಿಪಟ ಹಬ್ಬವೆಂದೇ ಹೇಳುವ ಸಂಕ್ರಾಂತಿಯಂದು ನಗರದಲ್ಲಿ ಗಣ್ಯರು, ಹಿರಿಯರು, ಯುವಕರು ಮತ್ತು ಚಿಣ್ಣರು ಗಾಳಿಪಟ ಹಾರಿಸಿ, ಸಂಭ್ರಮಿಸಿದರು.
ಸೋಮವಾರ ಬೆಳಿಗ್ಗೆ ಗಾಳಿಪಟ ಹಾರಿಸುವ ಹಿನ್ನೆಲೆಯಲ್ಲಿ ನಗರದ ವಿವಿಧ ಬಡಾವಣೆಗಳ 25ಕ್ಕೂ ಅಧಿಕ ಛಾವಣಿಗಳ ಮೇಲೆ ಶಾಮಿಯಾನ ಹಾಕಿದ್ದು ಗಮನಕ್ಕೆ ಬಂತು. ಬಿಸಿಲಿನ ಕಾವು ಹೆಚ್ಚಾದಂತೆ ಹಬ್ಬದ ಊಟ ಮುಗಿಸಿಕೊಂಡ ಛಾವಣಿಗಳ ಮೇಲೆ ಹತ್ತಿ ಪಟ ಹಾರಿಸುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು.
ಹಳೆ ಅಡತ್ ಬಜಾರನ್ ಚಿದ್ರಿ ಛಾವಣಿ ಮೇಲೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ವಿಶ್ವನಾಥ ಪಾಟೀಲ ಮಾಡಗೂಳ್, ನಾರಾಯಣರಾವ ಚಿದ್ರಿ, ಕರಬಸಪ್ಪ ವಕೀಲ, ನಾರಾಯಣ ರಾಂಪೂರೆ, ಮಲ್ಲೇಶಿ ಶಂಕರಶೆಟ್ಟಿ ಇದ್ದರು.
ಅಗಡಿ, ಗಡ್ಡಲ್, ಮಾಶೆಟ್ಟಿ, ಸೀಗಿ, ತಾಂಡೂರ, ಜಾಜಿ, ಮರೂರ್, ಪರಮಶೆಟ್ಟಿ, ಯಲಾಲ್, ವಿಭೂತಿ, ಖೇಳಗಿ, ಕೋರಿ, ಕೋಕಾಟೆ, ದುರ್ಗದ್, ರಮೇಶ ಬುಳ್ಳಾ ಗೆಳೆಯರ ಬಳಗ, ಶೀಲವಂತ, ಜಾಧವ್ ಮೊದಲಾದವರ ಛಾವಣಿ ಮತ್ತು ಇಲ್ಲಿನ ಜೇರಪೇಟೆಯ ವಿವಿಧ ಪರಿವಾರ ಛಾವಣಿಗಳು, ಹಿರೇಮಠ, ಕರಿಅಯ್ಯನ ಮಠ, ಮುರಘಾಮಠ, ಕೆಂಪಯ್ಯನ ಮಠ, ಬಾಲಾಜಿ ಮಠ, ಕುಪ್ಗೀರ್ ಮಠ, ಕರಿಬಸಪ್ಪನ ಮಠ ಮೊದಲಾದ ಮಠಗಳ ಪ್ರಾಂಗಣದಲ್ಲೂ ಯುವಕರು, ಚಿಣ್ಣರು ಗಾಳಿಪಟ ಹಾರಿಸಿದರು.
ಈ ಪೈಕಿ ನೂರಖಾನ್ ಅಖಾಡಾದ ತನ್ವೀರ್ ಸಹೋದರರು ರೂ. 1 ಸಾವಿರ ಖರ್ಚುಮಾಡಿ, ಸಿದ್ದಪಡಿಸಿದ 18ಅಡಿ ಎತ್ತರದ ಗಾಳಿಪಟ ಸಾರ್ವಜನಿಕರ ಗಮನ ಸೆಳೆಯಿತು.