ಶ್ರೀರಂಗಪಟ್ಟಣ: ವರನಟ ಡಾ.ರಾಜಕುಮಾರ್ ಅವರ 85ನೇ ಜನ್ಮದಿನವನ್ನು ಡಾ.ರಾಜ್ ಅಭಿಮಾನಿಗಳು ಪಟ್ಟಣದಲ್ಲಿ ಬುಧವಾರ ಸಂಜೆ ಸಂಭ್ರಮದಿಂದ ಆಚರಿಸಿದರು.
ಇಲ್ಲಿನ ಕುವೆಂಪು ಉದ್ಯಾನದಲ್ಲಿ ಬುಧವಾರ ಸಂಜೆ ಎಸ್.ಐ.ಜಬ್ಬಾರ್ಸಾಬ್ ಕುಟುಂಬದ ಸದಸ್ಯರು ಹಾಗೂ ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ಅಭಿಮಾನಿಗಳು ಡಾ.ರಾಜಕುಮಾರ್ ಜನ್ಮದಿನವನ್ನು ವಿಶಿಷ್ಟವಾಗಿ ಆಚರಿಸಿದರು. ವರನಟನ ಅಪರೂಪದ ಛಾಯಾಚಿತ್ರಗಳು, ಪ್ರಮುಖ ಚಲನಚಿತ್ರಗಳ ಹೆಸರು, ಬಿರುದುಗಳನ್ನು ಒಳಗೊಂಡ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಹಸಿರು ತೋರಣ ಕಟ್ಟಿ ಕನ್ನಡದ ಬಾವುಟ ಹಾರಿಸಿದರು. ಡಾ.ರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ವರನಟ ಡಾ.ರಾಜಕುಮಾರ್ ಅವರ ಪುತ್ಥಳಿಯನ್ನು ಸ್ಥಾಪಿಸಲಾಗುವುದು ಎಂದು ನಗುವನಹಳ್ಳಿ ಎನ್.ಶಿವಸ್ವಾಮಿ, ಚಂದಗಾಲು ಶ್ರೀಧರ್, ಕಸಾಪ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ ತಿಳಿಸಿದರು. ಕುವೆಂಪು ಉದ್ಯಾನದಲ್ಲಿ ಸ್ಥಳಾವಕಾಶ ಇದ್ದು, ಪುರುಸಭೆ ಅನುಮತಿ ಪಡೆದು ಆಕರ್ಷಕ ಪುತ್ಥಳಿ ಸ್ಥಾಪಿಸುತ್ತೇವೆ ಎಂದು ಹೇಳಿದರು.
ಎಸ್.ಐ.ಜಬ್ಬಾರ್ಸಾಬ್ ಮಾತನಾಡಿ, ಡಾ.ರಾಜ್ ನುಡಿದಂತೆ ನಡೆದವರು. ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದು ಸ್ಮರಿಸಿದರು. ಪಿ.ಬಿ.ಶ್ರೀನಿವಾಸ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಕುಬೇರ್ಸಿಂಗ್, ಎಸ್.ಜೆ.ಇಬ್ರಾಹಿಂ, ಚಕ್ರಪಾಣಿ ಇತರರು ಇದ್ದರು.