ಮುಳಗುಂದ: ಪಟ್ಟಣದ ಆರಾಧ್ಯದೈವ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿಗಳ 152ನೇ ಸ್ಮರಣೋತ್ಸವ ಅಂಗವಾಗಿ ಬುಧವಾರ ಸಂಜೆ ಸಡಗರ, ಸಂಭ್ರಮದಿಂದ ರಥೋತ್ಸವ ಜರುಗಿತು. ವಿವಿಧ ಹೂವುಗಳ ಗುಚ್ಚ, ಬೃಹದಾಕಾರದ ಮಾಲೆ, ಬಾಳೆದಿಂಡು, ಕಬ್ಬಿನ ಗರಿಗಳಿಂದ ಶೃಂಗರಿಸಿದ್ದ ರಥದಲ್ಲಿ ಮಹಾಂತ ಶಿವಯೋಗಿಗಳ ಮೂರ್ತಿಯೂ ಅಲಂಕಾರಗೊಂಡು ಕಂಗೊಳಿಸುತ್ತಿತ್ತು. ಗವಿಮಠಾಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಕಂಪ್ಲಿಯ ಕಲ್ಮಠದ ಪ್ರಭು ಸ್ವಾಮೀಜಿ, ಅಗಡಿಯ ಸಂಗನಬಸವ ಸ್ವಾಮೀಜಿ, ನೀಲಗುಂದ ಗ್ವುದ್ನೆಶ್ವರ ಮಠದ ಪ್ರಭುಲಿಂಗದೇವರು, ಬೆಳ್ಳಟ್ಟಿಯ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗವಿಮಠದ ಕೇಂದ್ರ ಸ್ಥಳದಿಂದ ವಾಲಿಯವರ ವೃತ್ತದವರೆಗೂ ಜಯಘೋಷಗಳೊಂದಿಗೆ ಸಂಪ್ರದಾಯದಂತೆ ಭಕ್ತಾದಿಗಳು ಎಳೆದ ರಥೋತ್ಸವದ ಮೆರವಣಿಗೆಯಲ್ಲಿ ಮಂಗಳವಾದ್ಯ, ಭಜನೆ, ಡೊಳ್ಳು ಕುಣಿತ, ಬ್ಯಾಂಡ್ಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಟ್ಟಣದ ನಾಗರಿಕರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನತೆ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ-ಭಾವದಿಂದ ಪೂಜೆ ಸಲ್ಲಿಸಿ ಕೈಮುಗಿದು ನಮಿಸಿದರು. ಶ್ರೀಮಠದಿಂದ ನೇರ ಕಲ್ಮಠಕ್ಕೆ ಮರವಣಿಗೆ ತೆರಳಿ ಶ್ರೀಗಳ ಪಾದುಕೆಗಳಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಗವಿಮಠಕ್ಕೆ ತೆರಳಿತು.