ಸಂತೇಮರಹಳ್ಳಿ: ಭೀಮನ ಅಮಾವಾಸ್ಯೆ ಪ್ರಯಕ್ತ ಸಂತೇಮರಹಳ್ಳಿ ಮಾದಪ್ಪನ ಜಾತ್ರೆ ಸಂಭ್ರಮದಿಂದ ಗುರುವಾರ ನಡೆಯಿತು.
ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಭಾರಿಯು ನಡೆದ ಜಾತ್ರಾ ಮಹೋತ್ಸವದಲ್ಲಿ, ಮುಂಜಾನೆ ದೇವಸ್ಥಾನದ ದೇವರ ಮೂರ್ತಿಗೆ ಕ್ಷೀರಾಭಿಷೇಕ, ಕುಂಕುಮಾರ್ಚನೆ, ಬಿಲ್ವಾರ್ಚನೆ, ಪುಷ್ಪಾರ್ಚನೆಗಳು ನಡೆಯಿತು. ವಾದ್ಯ ಮೇಳಗಳೊಂದಿಗೆ ಹುಲಿ ವಾಹನದಲ್ಲಿ ಮಹದೇಶ್ವರ ಸ್ವಾಮಿ ದೇವರ ಉತ್ಸವ ಮೂರ್ತಿ ಕೂರಿಸಿ ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು.
ವಿವಿಧ ತಾಲ್ಲೂಕುಗಳಿಂದ ಸಾವಿರಾರು ಭಕ್ತರು ಭಾಗವಹಿಸಿ ಸರದಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಬಸ್ ನಿಲ್ದಾಣದಿಂದ ದೇವಸ್ಥಾನದವರೆಗೂ ಮುಂಜಾನೆಯಿಂದ ಸಂಜೆವರೆಗೂ ಜನಸಾಗರ ಹೆಚ್ಚಾಗಿ ಕಂಡು ಬಂತು. ರಸ್ತೆಯ ಉದ್ದಗಲಕ್ಕೂ ವಿದ್ಯುತ್ ದೀಪ ಮತ್ತು ದ್ವನಿವರ್ಧಕ, ಅಳವಡಿಸಿ, ಬಾಳೆ ಕಂಬಗಳನ್ನು ಕಟ್ಟಲಾಗಿತ್ತು. ಗ್ರಾಮಸ್ಥರು ಒಂದು ತಿಂಗಳಿನಿಂದಲೂ ಅಮಾವಾಸ್ಯೆಯ ವಿಶೇಷ ಪೂಜೆಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಭಕ್ತರಿಗೂ ಅನ್ನ ಸಂತರ್ಪಣೆ ನಡೆಯಿತು. ಟೆಂಟ್ಗಳನ್ನು ಹಾಕಿಕೊಂಡು ಕಡ್ಲೆಪುರಿ, ಸಿಹಿ ತಿನಿಸುಗಳ ಮಾರಾಟ ಭರ್ಜರಿಯಾಗಿ ನಡೆಯಿತು.