ಗಂಗಾವತಿ: ತಾಲ್ಲೂಕಿನ ಬಂಡಿ ಬಸಪ್ಪಕ್ಯಾಂಪಿನ ಮಾರಿಮುತ್ತು ದೇವಸ್ಥಾನದ 37ನೇ ವರ್ಷದ ಜಾತ್ರೋತ್ಸವದ ಅಂಗವಾಗಿ ಭಕ್ತರು ಕೆನ್ನೆಗೆ ಶಸ್ತ್ರ ಚುಚ್ಚಿಕೊಂಡು ಹಾಗೂ ಬೆನ್ನಿಗೆ ಕೊಕ್ಕೆ ಹಾಕಿಕೊಂಡು ಕಾರು-ಆಟೋ ಎಳೆಯುವ ಮೂಲಕ ಮಂಗಳವಾರ ಭಕ್ತಿಯ ಪರಾಕಾಷ್ಠೆ ಮೆರೆದರು.
ಸಂಗಾಪುರದ ಮಲ್ಲಾಪುರ ಕ್ರಾಸ್ ಬಳಿ ಇರುವ ಸಾರ್ವಜನಿಕ ಕೈಪಂಪಿನಿಂದ ಬೆಳಗ್ಗೆ 9ಕ್ಕೆ ಸಾಂಪ್ರದಾಯಕ ಆಚರಣೆಗೊಂದಿಗೆ ಆರಂಭವಾದ ಮೆರವಣಿಗೆ ಬಂಡಿಬಸಪ್ಪ ಕ್ಯಾಂಪಿನ ದೇವಸ್ಥಾನ ತಲುಪುವ ವೇಳೆಗೆ ಅಪರಾಹ್ನ 12ಗಂಟೆಯಾಗಿತ್ತು.
ಮೆರವಣಿಗೆ ಸಂದರ್ಭದಲ್ಲಿ ಲಕ್ಷ್ಮಿ, ಸರೋಜಮ್ಮ ಮತ್ತು ಮಂಜುನಾಥ ಎಂಬುವವರು ತಮ್ಮ ಕೆನ್ನೆಗೆ ಆರು ಅಡಿಗಿಂತಲೂ ಅಧಿಕ ಉದ್ದವಿರುವ ಶಸ್ತ್ರಗಳನ್ನು ಚುಚ್ಚಿಕೊಂಡು ಸಾರ್ವಜನಿಕರ ಗಮನ ಸೆಳೆಯುವ ಮೂಲಕ ತಮ್ಮ ಹರಕೆ ತೀರಿಸಿದರು.
ಇದೇ ಸಂದರ್ಭದಲ್ಲಿ ಕೃಷ್ಣ ಸ್ವಾಮಿ, ಮುರುಗ, ಕಾಳಿಯಪ್ಪ ರಘು ಎಂಬುವವರು ತಮ್ಮ ಬೆನ್ನಿಗೆ ಕೊಕ್ಕೆಗಳನ್ನು ಚುಚ್ಚಿಕೊಂಡು ಹಗ್ಗದ ಸಹಾಯದಿಂದ ಆಟೋ ಮತ್ತು ಕಾರುಗಳನ್ನು ಎಳೆಯುವ ಮೂಲಕ ಮೈನೆವರೇಳಿಸುವಂತೆ ಮಾಡಿದರು.
ತಮಿಳು ಭೊವಿ ಸಮಾಜದ ಮುಖಂಡರಾದ ಮರಿಸ್ವಾಮಿ, ವೈರಮಣಿ ಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಹನುಮಂತ, ಸುಂದರರಾಜ, ಮಹಿಳಾ ಪ್ರಮುಖರಾದ ಪದ್ಮ, ಧನವೇಲು ಮೊದಲಾದವರಿದ್ದರು.