ರಾಮಾಪುರ: ತಾಲ್ಲೂಕಿನ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿ ಮಂಗಳವಾರ ಮುನೇಶ್ವರ ಜಾತ್ರಾ ಮಹೋತ್ಸವ ವಿಜೃಂಬಣೆಯಿಂದ ನೆರವೇರಿತು.
ಪ್ರತೀವರ್ಷ ಸಂಕ್ರಾಂತಿ ಸಮಯದಲ್ಲಿ ಕೂಡ್ಲೂರಿನ ಪ್ರಧಾನ ದೇವತೆ ಮುನೇಶ್ವರ ಸ್ವಾಮಿಯ ದರ್ಶನ ಪಡೆಯಲು ರಾಜ್ಯದ ನಾನಾ ಮೂಲೆಗಳಿಂದ ಮಾತ್ರವಲ್ಲದೆ ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಆಗಮಿಸಿದ್ದರು.
ಜಾತ್ರೆ ಹಬ್ಬ ಹರಿದಿನಗಳು ಹೈಟೆಕ್ ಸ್ಪರ್ಶ ಪಡೆಯುತ್ತಿರುವ ಈ ದಿನಗಳಲ್ಲಿಯೂ ಹಳೆ ಸತ್ಸಂಪ್ರದಾಯದಂತೆ ಮುನೇಶ್ವರ ದೇವಾಲಯದಲ್ಲಿ ಎಡೆಸೇವೆ, ಮರಿತೀರ್ಥ, ತಲೆಮುಡಿ, ದೈವ ದೃಶ್ಯ, ಪಿಂಡ ಪ್ರಸಾದ ಸೇರಿದಂತೆ ಅನೇಕ ಪೂಜೆಗಳನ್ನು ಭಕ್ತರು ಸಂಭ್ರಮ ಸಡಗರಗಳಿಂದ ನೆರವೇರಿಸಿದರು.
ದೇವಾಲಯದ ಸುತ್ತಲೂ ಸಹಸ್ರಾರು ಕುರಿಕೋಳಿಗಳ ಬಲಿನೀಡುವ ಮೂಲಕ ಭಕ್ತರು ದೇವರಿಗೆ ತಮ್ಮ ಹರಕೆ ಕಾಣಿಕೆಗಳನ್ನು ಅರ್ಪಿಸಿ ದೇವಾಲಯದ ಸುತ್ತಲ ಜಮೀನುಗಳಲ್ಲೇ ಬೋಜನ ತಯಾರಿಸಿ ನೆಂಟರಿಷ್ಟರೊಡಗೂಡಿ ಸಹಭೋಜನ ನಡೆಸಿ ಸಂಭ್ರಮಿಸಿದರು.
ಮೂರು ವರ್ಷಗಳಿಗೊಮ್ಮೆ ನಡೆಯುವ ಈ ವಿಶೇಷ ಜಾತ್ರೆ ಹತ್ತುಹಲವಾರಿ ವಿಶೇಷತೆಗಳನ್ನು ಒಂದಿದ್ದು ಪ್ರತಿ ಜಾತ್ರೆಯ್ಲ್ಲಲೂ ಹಿಂದಿನ ಜಾತ್ರೆಗಿಂತ ಹೆಚ್ಚಿನ ಭಕ್ತರ ಆಗಮನ ಸೇರಿದಂತೆ ತಮಿಳುನಾಡಿನ ಗಡಿಭಾಗದಿಂದ ಭಕ್ತಸಾಗರವೇ ಈ ಜಾತ್ರೆಗೆ ಹರಿದುಬರುವುದು ವಿಶೇಷ.
ಜಾತ್ರೆಯ ಪ್ರಯುಕ್ತ ಗ್ರಾಮ ಸಂಪೂರ್ಣವಾಗಿ ತಳಿರುತೋರಣ, ವರ್ಣಮಯವಿದ್ಯುತ್ ದೀಪಗಳಿಂದ ಅಲಂಕರಿಸಿ ಎಲ್ಲೆಲ್ಲೂ ಸಂಭ್ರಮ ಸಡಗರ ನೆಲೆಮಾಡಿತ್ತು. ಭಕ್ತರಿಗೆ ಜಾತ್ರೆಯಲ್ಲಿ ತೊಂದರೆಯಾಗದಂತೆ ಪಂಚಾಯಿತಿ ವತಿಯಿಂದ ವಿಶೇಷ ಕುಡಿಯುವ ನೀರಿನ ವ್ಯವಸ್ಥೆ ಮತ್ತು ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಮಾಪುರ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.