ಕೆಂಭಾವಿ: ಪಟ್ಟಣದ ಶರಣಬಸವೇಶ್ವರ ಜಾತ್ರೆ ಹಾಗೂ ರಥೋತ್ಸವವು ಸೋಮವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಬೆಳಿಗ್ಗೆ 11 ಗಂಟೆಗೆ ಗೌಡರ ಕುಟುಂಬದವರಿಂದ ವಿಶೇಷ ಪೂಜೆ ನಡೆಯಿತು. ಸಂಜೆ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೇರಿದ್ದ ಸಹಸ್ರಾರು ಭಕ್ತಾದಿಗಳು ವಾದ್ಯ ಮೇಳಗಳೊಂದಿಗೆ ಜಯಘೋಷಣೆ ಹಾಕುತ್ತಾ ರಥವನ್ನು ಎಳೆದರು.
ರಥೋತ್ಸವ ಆರಂಭಗೊಳ್ಳುತ್ತಿದ್ದಂತೆಯೇ ಪುರುಷರು, ಮಕ್ಕಳು, ಮಹಿಳೆಯರು ಪ್ರತ್ಯೇಕ ಸಾಲುಗಳಲ್ಲಿ ತೆರಳಿ ದರ್ಶನ ಪಡೆದರು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಿಡಿಗಾಯಿ ಒಡೆದು ದರ್ಶನ ಪಡೆದರು. ಬಾಳೆಹಣ್ಣು, ಉತ್ತತ್ತಿಗಳನ್ನು ಹಾರಿಸಿ ಹರಕೆ ತೀರಿಸುತ್ತಿರುವುದು ಸಾಮಾನ್ಯವಾಗಿತ್ತು.
ಶರಣಬಸವೇಶ್ವರ ರಥೋತ್ಸವದ ಸಂದರ್ಭದಲ್ಲಿ ಕೆಂಭಾವಿ ಪಟ್ಟಣವು ನವ ವಧುವಿನಂತೆ ಶೃಂಗಾರಗೊಂಡಿತ್ತು, ಪ್ರತಿಯೊಬ್ಬರು ತಮ್ಮ ಮನೆಗಳ ಮುಂದೆ ತಳಿರು ತೋರಣದಿಂದ ಶೃಂಗಾರಗೊಳಿಸಿದ್ದು ಕಂಡು ಬಂದಿತು, ರಥೋತ್ಸವ ಸಾಗುವ ಬೀದಿಯಲ್ಲಿ ನೂರಾರು ಜನರು ಮಹಿಳೆಯರು, ಮಕ್ಕಳು, ವೃದ್ಧರು ಮಹಡಿಗಳ ಮೇಲೆ ಕುಳಿತು ವೀಕ್ಷಿಸಿದರು. ಮಕ್ಕಳು ಆಟಿಕೆಗಳನ್ನು ಪಡೆದು ಖುಷಿಪಟ್ಟರೆ, ಭಕ್ತರು ಶರಣಬಸವೇಶ್ವರ ದರ್ಶನ ಪಡೆಯುತ್ತಿದ್ದರು.
ರಥೋತ್ಸವದಲ್ಲಿ ಶರಣಬಸವೇಶ್ವರ ಸಮಿತಿ ಸದಸ್ಯರು ಹಾಜರಿದ್ದರು. ರಥೋತ್ಸವದ ಸಂದರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಜಗದೇವಪ್ಪ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು.
ಶ್ರೆಶೈಲಕ್ಕೆ ಪಾದಯಾತ್ರೆ:
ಶರಣಬಸವೇಶ್ವರ ಜಾತ್ರೆ ಹಾಗೂ ರಥೋತ್ಸವವನ್ನು ಮುಗಿಸಿ ಇಲ್ಲಿನ ನೂರಾರು ಭಕ್ತರು ಪ್ರತಿ ವರ್ಷದಂತೆ ಶ್ರೀಶೈಲಕ್ಕೆ ಪಾದಯಾತ್ರೆ ತೆರಳಿದರು.