ಕೃಷ್ಣರಾಜಪೇಟೆ: ತಾಲ್ಲೂಕಿನ ದಕ್ಷಿಣ ಕಾಶಿ ಖ್ಯಾತಿಯ ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ದಲಿಂಗೇಶ್ವರ ಯತಿಗಳ ರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಗವಿಮಠದ ಶೂನ್ಯ ಪೀಠಾಧ್ಯಕ್ಷ ಸ್ವತಂತ್ರ ಬಸವಲಿಂಗ ಶಿವಯೋಗಿಗಳು ರಥಕ್ಕೆ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಪವಾಡ ಪುರುಷರೆನಿಸಿದ್ದ ಸಿದ್ದಲಿಂಗೇಶ್ವರರ ಕುರಿತಾದ ಅನೇಕ ಸ್ಥಳ ಪುರಾಣಗಳು ಪ್ರಚಲಿತದಲ್ಲಿದ್ದು, ಅವುಗಳಲ್ಲಿ ವಿಶ್ವಾಸವಿಟ್ಟಿರುವ ಈ ಭಾಗದ ಗ್ರಾಮಗಳ ಜನರು ವಿವಿಧ ಸೇವೆಗಳನ್ನು ಮಾಡಲು ಮುಂದೆ ಬಂದಿರುವುದು ವಿಶೇಷ ಸಂಗತಿ ಎಂದರು.
ನೆರೆದಿದ್ದ ಜನರು ರಥಕ್ಕೆ ಹಣ್ಣು ಜವನ ಎಸೆಯುತ್ತಾ ಉಘೇ ಉಘೇ ಎಂದು ಘೋಷಣೆ ಮಾಡುತ್ತಾ ರಥವನ್ನು ಎಳೆದರು.
ಸುತ್ತಮುತ್ತಲಿನ ಗ್ರಾಮಗಳಾದ ವಿಠಲಾಪುರ, ಕಾಪನಹಳ್ಳಿ, ದೊದ್ದನಕಟ್ಟೆ, ಬಳ್ಳೇಕೆರೆ, ನಾಟನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ವಿವಿಧ ಸೇವೆ ನಡೆಸಿಕೊಟ್ಟರು.
ಭಕ್ತಾದಿಗಳಿಗೆ ಅನ್ನ ದಾಸೋಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಫೆ.28ರಂದು ರಾತ್ರಿ 9ಕ್ಕೆ ಸಿದ್ದಲಿಂಗೇಶ್ವರರ ತೆಪ್ಪೋತ್ಸವ ನಡೆಯಲಿದೆ.