ಬೆಂಗಳೂರು: ಸಂಯುಕ್ತ ನಗರ ಇಲೆವೆನ್ ತಂಡದವರು ಶುಕ್ರವಾರ ಇಲ್ಲಿ ಆರಂಭವಾದ ಎಸ್.ಎ.ಶ್ರೀನಿವಾಸನ್ ಸ್ಮಾರಕ 25 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಧ್ಯಕ್ಷರ ಇಲೆವೆನ್ ಎದುರು ಅಲ್ಪ ಮೊತ್ತಕ್ಕೆ ಕುಸಿದಿದ್ದಾರೆ.
ಎರಡು ದಿನಗಳ ಈ ಪಂದ್ಯದ ಮೊದಲ ದಿನ ಸಂಯುಕ್ತ ನಗರ ಇಲೆವೆನ್ ತನ್ನ ಮೊದಲ ಇನಿಂಗ್ಸ್ನಲ್ಲಿ 79.1 ಓವರ್ಗಳಲ್ಲಿ ಕೇವಲ 244 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಇದಕ್ಕೆ ಉತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿರುವ ಅಧ್ಯಕ್ಷರ ಇಲೆವೆನ್ 21 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 39 ರನ್ ಗಳಿಸಿದೆ.
ಟಾಸ್ ಗೆದ್ದ ಅಧ್ಯಕ್ಷರ ಇಲೆವೆನ್ ತಂಡದವರು ಮೊದಲು ಎದುರಾಳಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿದರು. ಆ ನಿರ್ಧಾರ ಸರಿಯಾಗಿಯೇ ಇತ್ತು. ಏಕೆಂದರೆ ಈ ತಂಡದ ವೇಗಿಗಳು ಆ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಂಡರು. ಬಳಿಕ ಸ್ಪಿನ್ನರ್ಗಳು ಕೂಡ ಪಾರಮ್ಯ ಮೆರೆದರು. ಅದಕ್ಕೆ ವೇಗಿ ಅಭಿಷೇಕ್ ಭಟ್ (47ಕ್ಕೆ4) ಹಾಗೂ ಲೆಗ್ ಸ್ಪಿನ್ನರ್ ಸಿನಾನ್ ಅಬ್ದುಲ್ ಖಾದರ್ (49ಕ್ಕೆ4) ಅವರ ಪ್ರಭಾವಿ ಬೌಲಿಂಗ್ ಸಾಕ್ಷಿ.
ಅಭಿಷೇಕ್ ಆರಂಭದಲ್ಲಿಯೇ ಸಂಯುಕ್ತ ನಗರ ಇಲೆವೆನ್ ಬ್ಯಾಟ್ಸ್ಮನ್ಗಳಿಗೆ ಬಲವಾದ ಪೆಟ್ಟು ನೀಡಿದರು. ಈ ಪರಿಣಾಮ ಈ ತಂಡದವರು 26 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆಘಾತಕ್ಕೆ ಸಿಲುಕಿದರು. ಈ ನಡುವೆಯೇ ಮಜೀದ್ (60; 94 ಎ, 8 ಬೌಂ.) ಹಾಗೂ ಚಿರಂಜೀವಿ (68; 128 ಎ, 6 ಬೌಂ.) ತಂಡಕ್ಕೆ ಆಸರೆಯಾದರು.
ಸಂಕ್ಷಿಪ್ತ ಸ್ಕೋರ್: ಸಂಯುಕ್ತ ನಗರ ಇಲೆವೆನ್: ಮೊದಲ ಇನಿಂಗ್ಸ್ 79.1 ಓವರ್ಗಳಲ್ಲಿ 244 (ಮಜೀದ್ 60, ಸಂಜಯ್ ಆರ್ ಕುಮಾರ್ 30, ಚಿರಂಜೀವಿ 68, ಅಮನ್ರಾಜ್ 33; ಅಭಿಷೇಕ್ ಭಟ್ 47ಕ್ಕೆ4, ಸಿನಾನ್ ಅಬ್ದುಲ್ ಖಾದರ್ 49ಕ್ಕೆ4); ಅಧ್ಯಕ್ಷರ ಇಲೆವೆನ್: 21 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 39 (ಕರುಣ್ ನಾಯರ್ ಬ್ಯಾಟಿಂಗ್ 26).