ವಿಜಾಪುರ: `ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಬದಲಾಯಿಸಬೇಕು ಎಂಬುದು ಆರ್ಎಸ್ಎಸ್ನ ಗೋಪ್ಯ ಕಾರ್ಯಸೂಚಿಯಾಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂಥದೊಂದು ಪ್ರಯತ್ನ ನಡೆದು ಅದು ವಿಫಲವಾಗಿದೆ.
ಸಂವಿಧಾನವನ್ನು ಬದಲಾಯಿಸಲು ಯಾರೇ ಮುಂದಾದರೂ ಭಾರತದ ದಲಿತರು ಅವರನ್ನು ಸುಮ್ಮನೆ ಬಿಡುವುದಿಲ್ಲ~ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಸೊಸೆ, ಭಾರತೀಯ ಬೌದ್ಧ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷೆ ಮೀರಾತಾಯಿ ಅಂಬೇಡ್ಕರ್ ಎಚ್ಚರಿಸಿದರು.
ಭಾರತೀಯ ಬೌದ್ಧ ಮಹಾಸಭೆಯಿಂದ ಭಾನುವಾರ ಇಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಬೌದ್ಧ ಧಮ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.`ಡಾ.ಅಂಬೇಡ್ಕರ್ ಅವರ ಅನುಯಾಯಿಗಳು ಎಂದು ಹೇಳಿಕೊಳ್ಳುವ ಹಲವಾರು ಮಂದಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ಅಂಬೇಡ್ಕರ್ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ. ಅಂಥ ವ್ಯಕ್ತಿಗಳ ಬಗ್ಗೆ ಸಮಾಜ ಎಚ್ಚರ ವಹಿಸಬೇಕಿದೆ~ ಎಂದರು.
`ಭಾರತದ ಪ್ರತಿ ಗುಡಿಸಿಲಿಗೂ ಬೌದ್ಧ ಧಮ್ಮವನ್ನು ತಲುಪಿಸುವ ಗುರಿಯನ್ನು ಭಾರತೀಯ ಬೌದ್ಧ ಮಹಾಸಭೆ ಹೊಂದಿದ್ದು, ದೇಶದ ಪ್ರತಿ ಜಿಲ್ಲೆಯಲ್ಲಿಯೂ ಬುದ್ಧ ವಿಹಾರ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಸಮಾಜದ ಪ್ರತಿಯೊಬ್ಬರೂ ಈ ಕಾರ್ಯದಲ್ಲಿ ಸಹಕರಿಬೇಕು~ ಎಂದು ಕೇಳಿಕೊಂಡರು.
ಭಾರತೀಯ ಬೌದ್ಧ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ಆರ್.ಕೆ. ವಾಘಮೋರೆ ಅಧ್ಯಕ್ಷತೆ ವಹಿಸಿದ್ದರು. ಭಂತೆ ಶಿವಲಿ (ಚೈತ್ಯಭೂಮಿ ಮುಂಬೈ), ಭಂತೆ ಸದ್ಧಾನಂದ, ಭಾರತೀಯ ಬೌದ್ಧ ಮಹಾಸಭೆ ರಾಷ್ಟ್ರೀಯ ಸಂಘಟಕ ಜಗದೀಶ ಸರ್ವೋದಯ, ಮಲ್ಲಿಕಾರ್ಜುನ ಭಾಲ್ಕಿ, ನರಸಿಂಗರಾವ ಮೈನಳ್ಳಿ (ಹೈದ್ರಾಬಾದ್), ಎಂ.ಡಿ. ಸರ್ವೋದಯ ಇತರರು ಮಾತನಾಡಿದರು.