ಉಡುಪಿ:‘ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬೇಕೆಂದು ಸಂವಿಧಾನ ದಲ್ಲಿ ತಿಳಿಸಿದೆ ಹೊರತು ಒಂದು ವರ್ಗಕ್ಕೆ ಮೀಸಲಾತಿ ನೀಡಬೇಕೆಂದು ತಿಳಿಸಿಲ್ಲ. ಕಾಂಗ್ರೆಸ್ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ಗಾಗಿ ಸಾಚಾರ್ ಸಮಿತಿ ವರದಿ ಯನ್ನು ಅನುಷ್ಟಾನಕ್ಕೆ ತಂದು ವರ್ಗ ಬೇಧ ಮತ್ತು ಸಂಘರ್ಷವನ್ನು ಮಾಡು ತ್ತಿದೆ ’ಎಂದು ವಿಧಾನ ಪರಿಷತ್ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಆರೋಪಿಸಿದರು.
ಬಿಜೆಪಿ ದೇಶದ ಒಗ್ಗಟ್ಟು, ಏಕತೆ, ಎಲ್ಲರಿಗೂ ಸರಿಸಮಾನವಾದ ನ್ಯಾಯ ಸಿಗಬೇಕೆಂದು ಆಶಿಸುತ್ತದೆ. ಸಂವಿಧಾನಾತ್ಮಕ ಮೀಸಲಾತಿಯನ್ನು ಕಾಂಗ್ರೆಸ್ ದುರುಪಯೋಗ ಮಾಡುವ ಮೂಲಕ ಕೋಮು ವಾದಿಯಾಗಿದೆ ಎಂದು ಉಡುಪಿಯಲ್ಲಿ ಭಾನು ವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ದೂರಿದರು.
ರಾಜ್ಯದ ಕಾಂಗ್ರೆಸ್ ನಾಯಕರ ಸುಳ್ಳು ವರದಿ ಯಂತೆ ಯಡಿ ಯೂರಪ್ಪ ಅವರು ಗಣಿಲೂಟಿಗೆ ಕಾರಣ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಯವರು ಸತ್ಯಾಸತ್ಯತೆಯನ್ನು ತಿಳಿದು ಕೊಳ್ಳಲಿ. 2002ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಗಣಿಗಾರಿಕೆ ಮಾಡಲು ರೆಡ್ಡಿ ಸಹೋದರರಿಗೆ ಪರವಾನಿಗೆ ನೀಡಿದ್ದರು, ರೆಡ್ಡಿಗಳು ಆಂಧ್ರದ ಮೂಲಕ ಅದಿರು ರಪ್ತು ಮಾಡಲು ಅಲ್ಲಿನ ಕಾಂಗ್ರೆಸ್ನ ಮುಖ್ಯ ಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಸಹಕಾರ ನೀಡಿದ್ದರು ಎಂಬುದನ್ನು ರಾಹುಲ್ ತಿಳಿಯಲಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಮಗ್ರ ಗಣಿ ನೀತಿಯನ್ನು ಜಾರಿಗೆ ತಂದು ಅದಿರು ರಪ್ತು ನಿಷೇಧಿಸಿದ್ದರು ಎಂದರು.
ಲೋಕಾಯುಕ್ತ ವರದಿಯಲ್ಲಿ ಹೆಸರಿದ್ದು ಸಿಬಿಐ ವಿಚಾರಣೆಗೆ ತಡೆ ತಂದಿರುವ ಮಾಜಿ ಮುಖ್ಯ ಮಂತ್ರಿಗಳಾದ ಧರಂ ಸಿಂಗ್, ಎಚ್.ಡಿ.ಕುಮಾರಸ್ವಾಮಿ ಅವರ ತಡೆಯಾಜ್ಞೆಯನ್ನು ತೆರವು ಗೊಳಿಸಲಾಗಿದೆ, ಎಸ್.ಎಂ ಕೃಷ್ಣ ಅವರ ತಡೆಯಾಜ್ಞೆಯನ್ನು ತೆರವು ಮಾಡಿ ವಿಚಾರಣೆ ನಡೆಸಲಾಗುತ್ತದೆ. ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದು 10 ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಶೇ.40ರಷ್ಟೂ ಅನುದಾನ ಬಿಡುಗಡೆಯಾಗಿಲ್ಲ. ಚುನಾವಣೆಗಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ. ಶೋಭಾ ಅವರು ಮೋದಿಗಾಗಿ ಮತ ಯಾಚಿಸುತ್ತಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅವರು, ಅಂದು ಇಂದಿರಾಗಾಂಧಿಗೆ ಮತ ನೀಡಿ ಎಂದು ಕಾಂಗ್ರೆಸ್ ಕೇಳಿಲ್ಲವೇ ಎಂದರು ಪ್ರಶ್ನಿಸಿದರು.
ಗುಜರಾತ್ನಲ್ಲಿ ಅಭಿವೃದ್ಧಿ ಸಾಧಿಸಿರುವ ನರೇಂದ್ರ ಮೋದಿ ಪ್ರಧಾನಿಯಾಗಬೇಕು ಅದಕ್ಕಾಗಿ ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆಯನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು. ಬಿಜೆಪಿ ವಕ್ತಾರ ಮಟ್ಟಾರು ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.