ಚಿತ್ರದುರ್ಗ: ಎಂಜಿನಿಯರಿಂಗ್ ಶಿಕ್ಷಣವನ್ನು ಸಂಶೋಧನಾ ಆಧಾರಿತ ಮತ್ತು ಹೊಸ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ರೂಪಿಸಬೇಕಾಗಿದೆ ಎಂದು ಸಂಸದ ಜನಾರ್ದನಸ್ವಾಮಿ ಅಭಿಪ್ರಾಯಪಟ್ಟರು.
ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಭಾರತೀಯ ಅಭಿಯಂತರರ ಸಂಸ್ಥೆ ಹಾಗೂ ಕೆಇಬಿ ಎಂಜಿನಿಯರ್ಸ್ ಸಂಸ್ಥೆ ಸಹಯೋಗದಲ್ಲಿ ನಡೆದ ಎಂಜಿನಿಯರ್ ದಿನಾಚರಣೆ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರ 151ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂಜಿನಿಯರಿಂಗ್ ಶಿಕ್ಷಣದ ಗುಣಮಟ್ಟ ಕುಸಿದರೆ ಹಲವು ರೀತಿಯ ಪ್ರತಿಕೂಲ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದೇಶ ಸಾಕಷ್ಟು ಪ್ರಗತಿ ಸಾಧಿಸಿದ್ದರೂ ಇನ್ನೂ ಹೊರದೇಶಗಳ ತಂತ್ರಜ್ಞಾನದ ಮೇಲೆ ನಾವು ಅವಲಂಬಿತರಾಗಿದ್ದೇವೆ. ನಮ್ಮಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕಾಗಿದೆ ಎಂದು ನುಡಿದರು.
ಮೂಲ ವಿಜ್ಞಾನ ಆಧಾರಿತ ಎಂಜಿನಿಯರಿಂಗ್ ಶಿಕ್ಷಣಕ್ಕೆ ಸಂಶೋಧನೆ ಮತ್ತು ಆವಿಷ್ಕಾರವೇ ಅಂತಿಮ ಗುರಿಯಾಗಬೇಕು. ಆದರೆ, ಇಂದಿನ ಎಂಜಿನಿಯರಿಂಗ್ ಶಿಕ್ಷಣ ಕೇವಲ ಪರೀಕ್ಷೆ ಆಧಾರಿತವಾಗಿದೆ ಎಂದು ನುಡಿದರು.
ಯುವ ಎಂಜಿನಿಯರ್ಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಸಲಹೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಎಂಜಿನಿಯರ್ ಚಲುವರಾಜ್ ಮಾತನಾಡಿ, ಯೋಜನೆಯ ಸಂಪೂರ್ಣ ವಿವರ ನೀಡಿದರು. ಬಚಾವತ್ ಆಯೋಗದ ತೀರ್ಪಿನ ಅಡಿಯಲ್ಲಿ ಬಿ. ಸ್ಕೀಂನಲ್ಲಿ ಚಿತ್ರದುರ್ಗ, ಹೊಸದುರ್ಗ, ತರೀಕೆರೆ ತಾಲ್ಲೂಕುಗಳಿಗೆ ಸುಮಾರು 21.5 ಟಿಎಂಸಿ ನೀರು ದೊರೆಯಲಿದ್ದು, ಈ ಪ್ರದೇಶಗಳು ಸಂಪೂರ್ಣ ಅಭಿವೃದ್ಧಿಯಾಗಲಿವೆ ಎಂದರು.
ಎಂಜಿನಿಯರಿಂಗ್ ಸಂಸ್ಥೆಗಳು ತಜ್ಞ ಎಂಜಿನಿಯರ್ಗಳನ್ನು ರೂಪಿಸಬೇಕು ಎಂದು ಅವರು ಈ ಸಂದರ್ಭದಲ್ಲಿ ಸಲಹೆ ನೀಡಿದರು.
ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್.ಬಿ. ಶಿವಕುಮಾರ್ ಅವರು, ಸರ್ ಎಂ. ವಿಶ್ವೇಶ್ವರಯ್ಯ ಅವರ ಅಪ್ರತಿಮ ಸಾಧನೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು. ಸಮಾರಂಭದಲ್ಲಿ ವಿಜಯಾನಂದ, ಪಿ. ನಾಗರಾಜ್, ನಿವೃತ್ತ ಎಂಜಿನಿಯರ್ ರಾಧಾಕೃಷ್ಣಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚೆಲುವರಾಜ್ ಮತ್ತು ಡಾ.ಎಸ್.ಬಿ. ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.