ರಾಯಚೂರು: ಕೃಷಿ ವಿಶ್ವವಿದ್ಯಾಲಯದಲ್ಲಿ ತಜ್ಞರು ನಡೆಸುವ ಸಂಶೋಧನೆಯ ಶೇ 50ರಷ್ಟು ಫಲ ಇನ್ನೂ ರೈತರಿಗೆ ತಲುಪಿಲ್ಲ. ಪ್ರಯೋಗಾಲಯದಿಂದ ಈ ಸಂಶೋಧನೆಗಳು ರೈತರ ಹೊಲಕ್ಕೆ ತಲುಪಬೇಕಾಗಿದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಕೃಷಿ ಮೇಳ-2011ದ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಕೃಷಿ ವಿಶ್ವವಿದ್ಯಾಲಯ ಮತ್ತು ರೈತರಿಗೆ ಏನೂ ಸಂಬಂಧವಿಲ್ಲವೇನೋ ಎಂಬ ವಾತಾವರಣ ಹಿಂದೆ ಇತ್ತು. ಈಗ ಬದಲಾಗುತ್ತಿದೆ. ಕೃಷಿ ವಿವಿಯಲ್ಲಿ ಹಲವಾರು ಸಂಶೋಧನೆಗಳು ನಡೆದಿವೆ. ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣ, ಸಮಗ್ರ ಕೃಷಿ ಪದ್ಧತಿಯಂಥ ಹಲವಾರು ಸಂಶೋಧನೆಗಳ ಮಾದರಿಯನ್ನು ಪ್ರದರ್ಶಿಸುತ್ತಿದೆ. ಅಂಥ ಸಂಶೋಧನೆಗಳು ರೈತರಿಗೆ ಬೇಗ ತಲುಪಬೇಕಾಗಿದೆ ಎಂದರು. ಎಂಥದ್ದೇ ಉಪಯುಕ್ತ ಸಂಶೋಧನೆ ನಡೆಯಲಿ, ರೈತರು ಅನುಸರಿಸುತ್ತಾರೆ. ಆದರೆ ಕಷ್ಟ ಪಟ್ಟು ಬೆಳೆದ ಬಳಿಕ ಆತನ ಬೆಳೆಗೆ ವೈಜ್ಞಾನಿಕ ಬೆಲೆ ಮಾತ್ರ ದೊರಕಿಸುವ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಬೇಕು ಎಂದರು.
ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೆ ಡಾ.ಸ್ವಾಮಿನಾಥನ್ ವರದಿ ಹೇಳಿದೆ. ಸರ್ಕಾರವು ಇದನ್ನು ಅನುಷ್ಠಾನಗೊಳಿಸಬೇಕು. ಅದೆಲ್ಲ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ನುಣುಚಿಕೊಳ್ಳಬಾರದು ಎಂದರು. ಸಗೊಬ್ಬರ, ಕ್ರಿಮಿನಾಶಕ ಅತಿಯಾದ ಬಳಕೆ ಬಂದ್ ಮಾಡದೇ ಇದ್ದರೆ ಮುಂದಿನ ಪೀಳಿಗೆಗೆ ಬರಡು ಭೂಮಿಬಿಟ್ಟು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಚಿವ ರಾಜೂ ಗೌಡ , ಶಾಸಕರಾದ ಪ್ರತಾಪಗೌಡ ಪಾಟೀಲ್, ಸಯ್ಯದ್ ಯಾಸಿನ್, ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ್, ಖಾದಿ ಗ್ರಾಮೋದ್ಯೋಗ ಅಧ್ಯಕ್ಷ ಹರವಿ ಶಂಕರಗೌಡ, ಕುಲಪತಿ ಬಿ.ವಿ ಪಾಟೀಲ, ವಿವಿ ಆಡಳಿತ ಮಂಡಳಿ ಸದಸ್ಯರು ಹಾಗೂ ಇತರರಿದ್ದರು.