ಉಳ್ಳಾಲ: ವೈದ್ಯಕೀಯ ಜಗತ್ತಿನಲ್ಲಿ ನಿರಂತರ ಸಂಶೋಧನೆಗಳು ಮತ್ತು ತಂತ್ರಜ್ಞಾನಗಳು ಬದಲಾಗುತ್ತಿದ್ದು, ಇವುಗಳಿಗೆ ತಕ್ಕಂತೆ ವೈದ್ಯರು ಜ್ಞಾನವನ್ನು ಕಾಲಕಾಲಕ್ಕೆ ಪರಿಷ್ಕರಿಸಿಕೊಂಡು ವೃತ್ತಿ ನೈಪುಣ್ಯತೆ ಸಾಧಿಸಬೇಕು ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಶಾಂತಾರಾಮ ಶೆಟ್ಟಿ ಸಲಹೆ ನೀಡಿದರು.
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟಬಲ್ ಆಸ್ಪತ್ರೆಯ ಸೆಮಿನಾರ್ ಹಾಲ್ನಲ್ಲಿ ಶುಕ್ರವಾರ ನಡೆದ ನಾಲ್ಕನೇ ಟೆಂಪೋರಲ್ ಬೋನ್ ಡಿಸೆಕ್ಷನ್ ಹ್ಯಾಂಡ್ಸ್ ಆನ್ ಕೋರ್ಸ್ ಮತ್ತು ಎರಡು ದಿನದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ.ಅರುಣಾಚಲಂ ಕುಮಾರ್ ಕಾರ್ಯಗಾರಕ್ಕೆ ಚಾಲನೆ ನೀಡಿದರು. ನಿಟ್ಟೆ ವಿ.ವಿ ಕುಲಸಚಿವ ಪ್ರೊ.ಸುಧಾಕರ ನಾಯಕ್, ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಲ್ಲಿಕೋಟೆಯ ಡಾ.ಮನೋಜ್, ಬೆಂಗಳೂರಿನ ಡಾ.ನಂಜುಡಪ್ಪ, ಡಾ.ದೀಪಕ್ ಹಳದೀಪುರ್, ಡಾ.ವಿಶಾಲ್, ವೆಲ್ಲೂರಿನ ಡಾ.ರೂಪಾ ವೇದಾಂತ್, ಪೊಲ್ಲಾಚಿಯ ಡಾ.ವಿ.ಆನಂದ್, ಕೋಲಾರದ ಡಾ.ಅಜೀಮ್, ಡಾ.ಕೆ.ಪಿ.ಎಸ್. ಪ್ರಭು ಕಣ್ಣೂರು, ಕಾರ್ಯಕ್ರಮ ಆಯೋಜನಾ ಸಮಿತಿ ಕಾರ್ಯದರ್ಶಿ ಕ್ಷೇಮದ ವೈಸ್ ಡೀನ್ ಡಾ. ಸತೀಶ್ ಭಂಡಾರಿ ಭಾಗವಹಿಸಿದ್ದರು. ಮೆಡಿಕಲ್ ಅಕಾಡೆಮಿಯ ಮೂಗು, ಗಂಟಲು ವಿಭಾಗ ಮತ್ತು ಅನಾಟಮಿ ವಿಭಾಗದ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.