ತುಮಕೂರು: ಬದಲಾಗುತ್ತಿರುವ ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅಧ್ಯಾಪಕರು ಸಂಶೋಧನಾ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತೆ ನಿವೃತ್ತ ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ಪ್ರೊ.ಟಿ. ಗಂಗಾಧರಯ್ಯ ಸಲಹೆ ಮಾಡಿದರು.
ತುಮಕೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಅಧ್ಯಾಪಕರ ಸಂಘವು ನಿವೃತ್ತ ಅರ್ಥಶಾಸ್ತ್ರ ಅಧ್ಯಾಪಕರು ಮತ್ತು ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಅಧ್ಯಾಪಕರಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಧ್ಯಾಪಕ ಕೆ.ಸಿ.ಬಸಪ್ಪ ಮಾತನಾಡಿ, ಗಂಗಾಧರಯ್ಯ ಸರಳ, ಪ್ರಾಮಾಣಿಕ, ದಕ್ಷ ಆಡಳಿತಗಾರ ಹಾಗೂ ಅಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ಭವಿಷ್ಯದ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದರು.
ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದ ಪ್ರೊ.ತಿಪ್ಪೇಸ್ವಾಮಿ, ಪ್ರೊ.ಜಯದೇವಪ್ಪ, ಪ್ರೊ.ರಾಜಾರೆಡ್ಡಿ, ಪ್ರೊ.ವೈ.ಎಸ್.ಹನುಮಂತರಾಯ, ಪ್ರೊ.ಟಿ.ಆರ್.ಲೀಲಾವತಿ, ಪ್ರೊ. ಸವಿತಾ ಅವರನ್ನು ಸನ್ಮಾನಿಸಲಾಯಿತು.
ಸಂಶೋಧಕರು ಪೂರ್ವಗ್ರಪೀಡಿತ ರಾಗದೆ ಉತ್ತಮ ಗುಣಮಟ್ಟದ ಪ್ರಬಂಧಗಳನ್ನು ಮಂಡಿಸಿ ಸಮಾಜಕ್ಕೆ ಉಪಯುಕ್ತವಾಗಬೇಕು ಎಂದು ಪ್ರೊ.ಜಯದೇವಪ್ಪ ಹೇಳಿದರು.ಪರೀಕ್ಷಾ ಮಂಡಳಿ ಅಧ್ಯಕ್ಷ ಪ್ರೊ. ಎಂ.ಎಸ್. ನರಸಿಂಹನ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿ ಪ್ರೊ.ಡಿ.ಆರ್. ಮೋಹನಕುಮಾರ್ ಸ್ವಾಗತಿಸಿದರು. ಪ್ರೊ.ಎಚ್.ಎಸ್. ಪ್ರಕಾಶ್ ವಂದಿಸಿದರು. ಪ್ರೊ.ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.