ಬಳ್ಳಾರಿ: ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಆರೋಪ ಹೊರಿಸಿ ಮನೆಯೊಂದಕ್ಕೆ ನುಗ್ಗಿ ದಾಂಧಲೆ ನಡೆಸಿದ ರಾಯಚೂರು ಸಂಸದ ಸಣ್ಣಫಕೀರಪ್ಪ ಅವರ ಮಗ ಮುತ್ತು ಮತ್ತು ಇತರ ನಾಲ್ವರನ್ನು ಪೊಲೀಸರು ಬುಧವಾರ ರಾತ್ರಿ ಇಲ್ಲಿ ಬಂಧಿಸಿದ್ದಾರೆ.
ಜನವಸತಿ ಪ್ರದೇಶದಲ್ಲಿ ವೇಶ್ಯಾವಾಟಿಕೆ ನಡೆಸುತ್ತ ಪ್ರದೇಶದ ಹೆಸರು ಕೆಡಿಸಲಾಗುತ್ತಿದೆ ಎಂದು ಆರೋಪಿಸಿ ಕೋಟೆ ಪ್ರದೇಶದ ಕೆಎಚ್ಬಿ ಕಾಲೋನಿಯಲ್ಲಿ ಮಹಿಳೆಯರೇ ವಾಸಿಸುತ್ತಿದ್ದ ಮನೆಯೊಂದಕ್ಕೆ ನುಗ್ಗಿದ ಮುತ್ತು ನೇತೃತ್ವದ ಗುಂಪು ಮನೆಯಲ್ಲಿದ್ದ ಯುವತಿ, ಆಕೆಯ ಸಹಪಾಠಿ ಯುವಕ ಹಾಗೂ ಮಹಿಳೆಯರ ಮೇಲೆ ತೀವ್ರ ಹಲ್ಲೆ ನಡೆಸಿತ್ತು.
ಈ ಗುಂಪು ನೈತಿಕ ಪೊಲೀಸ್ಗಿರಿ ಪ್ರದರ್ಶಿಸುತ್ತ ಹಲ್ಲೆ ನಡೆಸಿದೆ ಎಂದು ಯುವತಿ ಕೌಲ್ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರತೀಕಾರದ ದಾಳಿ: ‘ಸಂಸದ ಸಣ್ಣಫಕೀರಪ್ಪ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎಂಬ ಯುವಕ ನನ್ನ ತಾಯಿಯ ಬಳಿ ಅಸಭ್ಯವಾಗಿ ವರ್ತಿಸಿದ್ದರಿಂದ, ಡಿ. 12ರಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ 50ಕ್ಕೂ ಅಧಿಕ ಜನರ ಗುಂಪು ಮನೆಗೆ ನುಗ್ಗಿ, ಇಲ್ಲಸಲ್ಲದ ಆರೋಪ ಮಾಡಿ, ಹಲ್ಲೆ ನಡೆಸಿದೆ’ ಎಂದೂ ಆಕೆ ದೂರಿದ್ದರು. ಆದರೆ ಈ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿತ್ತು ಎಂದು ಸುತ್ತಲಿನ ಜನ ಆರೋಪಿಸಿದ್ದಾರೆ.