ಚಿಕ್ಕೋಡಿ: ತಾಲ್ಲೂಕಿನ ಯಕ್ಸಂಬಾ ಗ್ರಾಮದ ರಾಜರಾಜೇಶ್ವರಿ ನಾಡಹಬ್ಬ ಉತ್ಸವ ಸಮಿತಿಯ ಆಶ್ರಯದಲ್ಲಿ ಆಚರಿಸಲಾಗುತ್ತಿರುವ ನಾಡಹಬ್ಬ ಉತ್ಸವದ `ಕನ್ನಡ ಜಾತ್ರೆ~ಗೆ ಶ್ರಿಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
`ದೇಶಾಭಿಮಾನ ಮತ್ತು ಧರ್ಮಾಭಿಮಾನ ಹೊರತುಪಡಿಸಿ ಯಾವುದೇ ಅಭಿಮಾನಗಳು ನಮ್ಮ ಏಳ್ಗೆ ಮಾಡುವುದಿಲ್ಲ. ಪ್ರತಿಯೊಂದು ವಸ್ತುವಿನಲ್ಲಿ ಶಕ್ತಿ ತುಂಬಿಕೊಂಡಿದ್ದು ಶಕ್ತಿರೂಪವಾದ ನಾಡದೇವಿಗೆ ಪೂಜಿಸಿ ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಜಮಖಂಡಿಯ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಯಕ್ಸಂಬಾದ ಮಹಾಲಿಂಗ ಸ್ವಾಮೀಜಿ, ನಿಪ್ಪಾಣಿ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿಕೊಂಡಿದ್ದರು. ಶಾಸಕ ಪ್ರಕಾಶ ಹುಕ್ಕೇರಿ, ತಾ.ಪಂ.ಸದಸ್ಯ ಅಣ್ಣಾಸಾಹೇಬ ಇಂಗಳೆ, ಕಸಾಪ ಚಿಕ್ಕೋಡಿ ಘಟಕದ ಅಧ್ಯಕ್ಷ ಡಾ. ದಯಾನಂದ ನೂಲಿ, ದೂಧಗಂಗಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಎಸ್.ಎನ್. ಸಪ್ತಸಾಗರೆ, ಪಿಎಸ್ಐ ರಾಘವೇಂದ್ರ ಹಳ್ಳೂರ ಪಾಲ್ಗೊಂಡಿದ್ದರು.
ಕನ್ನಡ ಜಾತ್ರೆಯಲ್ಲಿ ಕರಡಿಮಜಲು, ಕುದುರೆ ಕುಣಿತ, ವೀರಭದ್ರ ಕುಣಿತ, ಹಾಗೂ ಚಿಕ್ಕೋಡಿಯ ಸರ್ದಾರ ಬ್ಯಾಂಡ್ ಮೇಳಗಳು ಗಮನ ಸೆಳೆದವು. ಗಣೇಶ ಶಾಲೆ ಮಕ್ಕಳು ವೀರವನಿತೆಯರು ಮತ್ತು ನಾಡದೇವಿಯ ರೂಪಕ ಪ್ರದರ್ಶಿಸಿದರು. ಸಮಿತಿ ಅಧ್ಯಕ್ಷ ಸಂತೋಷ ಅಲಗುರೆ ಧ್ವಜಾರೋಹಣ ನೆರವೇರಿಸಿದರು. ಪಂಚಾಕ್ಷರಿ ಮಠಪತಿ, ಪಿಂಟು ಬಡಿಗೇರ ಪೂಜೆ ಸಲ್ಲಿಸಿದರು. ಬಾಲಚಂದ್ರ ಬಾಕಳೆ, ಸಚಿನ ಗುರವ, ಸಂತೋಷ ಅಲಗುರೆ, ಭೀಮಾ ಹಿಟಣೆ, ಮಹೇಶ ಬಾಕಳೆ, ದುಂಡಪ್ಪ ಹಿಟಣೆ, ದತ್ತಾ ಕಬಾಡೆ ಉಪಸ್ಥಿತರಿದ್ದರು.