ಶಿವಮೊಗ್ಗ: ಗ್ರಾಮೀಣ ಸಂಸ್ಕೃತಿ ಹಾಗೂ ನಗರ ಸಂಸ್ಕೃತಿಗಳ ನಡುವಿನ ತಿಕ್ಕಾಟವೇ ಸಾಮಾಜಿಕ ಸಮಸ್ಯೆಗೆ ಕಾರಣವಾಗಿದೆ ಎಂದು ಕುವೆಂಪು ವಿವಿ ಸಮಾಜಶಾಸ್ತ್ರ ವಿಭಾಗ ಪ್ರಾಧ್ಯಾಪಕ ಪ್ರೊ.ಎಂ. ಗುರುಲಿಂಗಯ್ಯ ಹೇಳಿದರು.
ನಗರದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಶುಕ್ರವಾರ ಸಮಾಜಶಾಸ್ತ್ರ ವಿಭಾಗ ಮತ್ತು ಸಮಾಜ ಶಾಸ್ತ್ರ ವೇದಿಕೆ, ಸಿಪಿಇ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ `ಪ್ರಚಲಿತ ಸಾಮಾಜಿಕ ಸಮಸ್ಯೆಗಳು ಹಾಗೂ ಪರಿಣಾಮ ಮತ್ತು ಸವಾಲುಗಳು~ ಕುರಿತ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಗುಂಪು ಅಥವಾ ವ್ಯಕ್ತಿಗಳಲ್ಲಿನ ಎರಡು ಸಂಸ್ಕೃತಿಗಳ ನಡುವೆ ಸಿಕ್ಕಿಹಾಕಿಕೊಂಡಿರುವ ಘಟನೆಯೇ ಹಂಚಿಕೆಗೆ ಕಾರಣವಾಗಿದೆ ಎಂದರು.
ಭಾರತದಂತೆ ಇತರೆ ದೇಶಗಳಲ್ಲಿ ಅನೇಕ ಸಮಸ್ಯೆಗಳಿದ್ದರೂ ಅವು ಭಾರತದಲ್ಲಿ ಪರಿಣಾಮ ಬೀರಿದಷ್ಟು ಅಗಾಧ ಪರಿಣಾಮ ಬೀರುವುದಿಲ್ಲ. ನಮ್ಮ ದೇಶದಲ್ಲಿ ಪರಿಹಾರ ಕಾಣದ ನೂರಾರು ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿದಿವೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಎಲ್.ಎನ್.ಮಹೇಂದ್ರಕರ್, ಸಹ್ಯಾದ್ರಿ ಕಲಾ ಕಾಲೇಜು ಪ್ರಾಂಶುಪಾಲ ಪ್ರೊ.ಬಿ.ಎಸ್.ಮಹದೇವಯ್ಯ, ಸಮಾಜ ಶಾಸ್ತ್ರ ಮುಖ್ಯಸ್ಥ ಡಾ.ಎಂ. ಪೂರ್ವಾಚಾರ್, ಪ್ರೊ.ಮೇಜರ್ ನಾಗರಾಜ್, ಡಾ.ಸಕ್ರಿ ನಾಯ್ಕ, ಸುಮಿತ್ರಾ ಭಟ್ ಮತ್ತಿತರರು ಉಪಸ್ಥಿತರಿದ್ದರು.