ಹಿರಿಯೂರು: ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾಗಿರುವ ಭಾರತೀಯ ಸಂಸ್ಕೃತಿ, ಸನಾತನ ಧರ್ಮದಿಂದ ವಿಮುಖವಾಗಿರುವ ಕಾರಣದಿಂದ ಯುವಪೀಳಿಗೆ ಹಾದಿ ತಪ್ಪುತ್ತಿದೆ ಎಂದು ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ಮಂಜುನಾಥ್ ವಿಷಾದ ವ್ಯಕ್ತಪಡಿಸಿದರು.
ನಗರದಲ್ಲಿ ಗುರುವಾರ ಬಾಪೂಜಿ ಶಿಕ್ಷಣ ಸಂಸ್ಥೆ, ರೆಡ್ಕ್ರಾಸ್, ಆರ್ಯವೈಶ್ಯ ಮಂಡಳಿ, ಸ್ಕೌಟ್ ಮತ್ತು ಗೈಡ್ಸ್, ಆತ್ಮ ಮೆಂಟಲ್ ಹೆಲ್ತ್ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರಾಣ ಪುರುಷರು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದವರು, ಗಡಿಗಳಲ್ಲಿ ದೇಶ ಕಾಯಲು ಪ್ರಾಣ ಮೀಸಲಿಟ್ಟವರು, ಸಮಾಜ ಸೇವೆಯಲ್ಲಿ ನಿರತರಾದವರನ್ನು ಯುವಕರು ಆದರ್ಶ ವ್ಯಕ್ತಿಗಳನ್ನಾಗಿ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಡಿವೈಎಸ್ಪಿ ಎನ್. ರುದ್ರಮುನಿ ಮಾತನಾಡಿ, ನೈತಿಕ ಶಿಕ್ಷಣ ಯುವ ಪೀಳಿಗೆಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಆರ್ಯವೈಶ್ಯ ಮಂಡಳಿ ಗೌರವಾಧ್ಯಕ್ಷ ಕೆ.ಆರ್. ವೆಂಕಟೇಶ್ ಮಾತನಾಡಿ, ಜ್ಞಾನದ ಬಲದ ಮೂಲಕ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡು, ಕೆಟ್ಟದ್ದರಿಂದ ದೂರವಿದ್ದು, ಒಳ್ಳೆಯದನ್ನು ಮಾತ್ರ ಅಳವಡಿಸಿಕೊಂಡರೆ ಬದುಕು ಹಸನಾಗುತ್ತದೆ ಎಂದರು.
ಶಶಿಕಲಾ ರವಿಶಂಕರ್, ಎಚ್.ಎಸ್. ಸುಂದರರಾಜ್ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಮಹಮದ್ ಫಕೃದ್ದೀನ್, ಸೌಭಾಗ್ಯವತಿ ದೇವರು, ಮುತ್ತುಲಕ್ಷ್ಮೀ, ಡಾ.ಸೆಲ್ವಕುಮಾರ್, ರಣದೀಪ ರಾಜಕುಮಾರ್, ಎಂ. ಕೃಷ್ಣಮೂರ್ತಿ, ಸೆಲೈ ಕುಮಾರನ್, ದೇವರಾಜ ಮೂರ್ತಿ, ಎ. ಮಂಜುನಾಥ್, ಎಂ.ಎನ್. ರಮೇಶ್, ಪಿ.ಆರ್. ಸತೀಶ್ಬಾಬು, ನಾಗಸುಂದರಮ್ಮ, ಉಮಾ ರಾಜಶೇಖರ್ ಉಪಸ್ಥಿತರಿದ್ದರು. ಆರ್. ಮಂಜುನಾಥ್ ಸ್ವಾಗತಿಸಿದರು. ಗಜೇಂದ್ರ ಶರ್ಮ ಕಾರ್ಯಕ್ರಮ ನಿರೂಪಿಸಿದರು.
ರಾಷ್ಟ್ರಮಟ್ಟಕ್ಕೆ ಆಯ್ಕೆ
ಗದಗದಲ್ಲಿ ಈಚೆಗೆ ನಡೆದ ರಾಜ್ಯಮಟ್ಟದ ಮಹಿಳಾ ಕ್ರೀಡಾಕೂಟ (17ವರ್ಷ ಒಳಗಿನ)ದಲ್ಲಿ 3,000 ಮೀ.
ಓಟದ ಸ್ಪರ್ಧೆಯಲ್ಲಿ ಹಿರಿಯೂರಿನ ವಾಗ್ದೇವಿ ಪ್ರೌಢಶಾಲೆ ವಿದ್ಯಾರ್ಥಿನಿ ಸಿ.ಕೆ. ಶ್ರಾವಣಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟ (17ವರ್ಷ ಒಳಗಿನ ವಯೋಮಿತಿ) ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.