ಸಕಲೇಶಪುರ: ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ ಪಟ್ಟಣದ ಹಳೆ ಬಸ್ ನಿಲ್ದಾಣ ಹಾಗೂ ಮಾರುಕಟ್ಟೆ ರಸ್ತೆಯಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನು ಶುಕ್ರವಾರ ಮುಂಜಾನೆ ತೆರವುಗೊಳಿಸಲಾಯಿತು.
ಮುಂಜಾನೆ 5 ರಿಂದ 8 ಗಂಟೆವರೆಗೆ ನಡೆದ ಕಾರ್ಯಾಚರಣೆಯಲ್ಲಿ ಹಳೆ ಬಸ್ ನಿಲ್ದಾಣದಲ್ಲಿದ್ದ ಒಟ್ಟು 38 ಅಂಗಡಿಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ 12 ಅಂಗಡಿಗಳನ್ನು ಬಿಟ್ಟು ಉಳಿದ 26 ಅಂಗಡಿಗಳನ್ನು ತೆರವುಗೊಳಿಸಲಾಯಿತು. ತರಕಾರಿ ಮಾರುಕಟ್ಟೆಯಿಂದ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಬದಿಯಲ್ಲಿ ಇದ್ದ 19 ಅಂಗಡಿಗಳನ್ನೂ ತೆಗೆಯಲಾಯಿತು.
ಂಗಡಿಗಳನ್ನು ತೆರವುಗೊಳಿಸುವ ಬಗ್ಗೆ ಮೂರು ದಿನಗಳ ಹಿಂದೆಯೇ ಪುರಸಭೆಯವರು ಆಟೋದಲ್ಲಿ ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ ಪಟ್ಟಿಗೆ ಅಂಗಡಿಯವರು ಗುರುವಾರ ರಾತ್ರಿಯೇ ಅಂಗಡಿಗಳನ್ನು ಖಾಲಿ ಮಾಡಿದ್ದರು. ಇದರಿಂದಾಗಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಯಾವುದೇ ವಿರೋಧ ಕಂಡು ಬರಲಿಲ್ಲ.
ಉಪವಿಭಾಗಾಧಿಕಾರಿ ಪಲ್ಲವಿ ಆಕುರಾತಿ, ತಹಶೀಲ್ದಾರ್ ಚಂದ್ರಮ್ಮ, ಪುರಸಭೆ ಅಧ್ಯಕ್ಷ ಎಚ್.ಎ.ಭಾಸ್ಕರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಚಂದ್ರಶೇಖರ್, ಮುಖ್ಯಾಧಿಕಾರಿ ಬಸವರಾಜು, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಇದ್ದರು.ಒಂದು ಕ್ರೇನ್, ಎರಡು ಜೆಸಿಬಿ ಯಂತ್ರಗಳು ಹಾಗೂ ನಾಲ್ಕು ಟ್ರ್ಯಾಕ್ಟರ್ಗಳನ್ನು ತೆರವು ಕಾರ್ಯಾಚರಣೆಗೆ ಬಳಸಲಾಗಿತ್ತು.