ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯಲ್ಲಿ ‘ಸಕಾಲ’ ಬಾಕಿ ಅರ್ಜಿಗಳ ಸಂಖ್ಯೆ ಇಳಿಮುಖ ವಾಗಿದೆ ಎಂದು ‘ಸಕಾಲ’ ಮಿಷನ್ ನಿರ್ದೇಶಕರು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ತಿಳಿಸಿದರು.
ಕಂದಾಯ ಇಲಾಖೆಯಲ್ಲಿ ಬಾಕಿ ಅರ್ಜಿಗಳ ಶೀಘ್ರ ವಿಲೇವಾರಿ ಕುರಿತು ಬುಧವಾರ ಕರೆಯಲಾಗಿದ್ದ ಬೆಂಗಳೂರು ಜಿಲ್ಲೆಯ ತಹಶೀಲ್ದಾರರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅತಿ ಹೆಚ್ಚಿನ ೪೯ ಸೇವೆಗಳನ್ನು ಕಂದಾಯ ಇಲಾಖೆ ನೀಡುತ್ತಿದೆ. ಸಹಜವಾಗಿಯೇ ಇಲ್ಲಿ ಸ್ವೀಕರಿಸುವ ಮತ್ತು ವಿಲೇವಾರಿಯಾಗುವ ಅರ್ಜಿಗಳ ಸಂಖ್ಯೆಯೂ ಹೆಚ್ಚು. ಜಾತಿ, ಆದಾಯ ಮತ್ತು ವಾಸ ಸ್ಥಳ ಪ್ರಮಾಣಪತ್ರ ನೀಡುವಲ್ಲಿ ಹೆಚ್ಚು ವಿಳಂಬವಾಗುತ್ತಿದೆ. ಶಾಲಾ-ಕಾಲೇ ಜುಗಳ ಆರಂಭದ ದಿನಗಳಲ್ಲಿ ಈ ವಿಭಾಗದಲ್ಲಿ ಹೆಚ್ಚು ಅರ್ಜಿ ಸ್ವೀಕರಿಸಲಾಗುತ್ತಿದೆ. ಆದರೆ ಸಿಬ್ಬಂದಿಯ ಕೊರತೆ ಕಾರಣದಿಂದಾಗಿ ವಿಳಂಬವಾಗುತ್ತಿದೆ ಎಂದರು.
ಪ್ರಸ್ತತ ತಿಂಗಳಲ್ಲಿ ಕಂದಾಯ ಇಲಾಖೆಯಲ್ಲಿ ೩೯,೯೯೬ ಅರ್ಜಿಗಳು ಸ್ವೀಕೃತವಾಗಿವೆ. ಈ ಪೈಕಿ ೩೯,೨೯೫ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ೧೪೮೩ ಅರ್ಜಿಗಳು ಬಾಕಿ ಉಳಿದಿವೆ. ಇದು ಹಿಂದಿನ ತಿಂಗಳಿಗೆ ಹೋಲಿಸಿದರೆ ಬಾಕಿ ಇರುವ ಅರ್ಜಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಮುಖವಾಗಿದೆ ಎಂದರು.
ಸಕಾಲದಡಿ ಸ್ವೀಕರಿಸುವ ಅರ್ಜಿಯೊಂದಿಗೆ ಅರ್ಜಿದಾರರ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿಕೊಳ್ಳಬೇಕೆಂದು ಅವರು ತಹಶೀಲ್ದಾರರಿಗೆ ಸೂಚಿಸಿದರು.