ಕೊಪ್ಪಳ: ಜಿಲ್ಲೆಯಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯನ್ನಾಗಿ ಪರಿವರ್ತಿಸುವ (ಎನ್ಎ) ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸಕಾಲ ವ್ಯಾಪ್ತಿಗೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್ರಾಜ್ ಹೇಳಿದರು.
ನಗರದಲ್ಲಿ ಶುಕ್ರವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿ ಸಲ್ಲಿಸಿದ 120 ದಿನಗಳ ಒಳಗಾಗಿ ಎನ್ಎ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.
ಎನ್ಎ ಮಾಡಿಸುವ ಸಂಬಂಧ ಅರ್ಜಿದಾರರು ಇನ್ನು ಮುಂದೆ ತಹಶೀಲ್ದಾರರ ಕಚೇರಿಯನ್ನು ಎಡತಾಕಬೇಕಿಲ್ಲ. ಈ ಸಂಬಂಧದ ಅರ್ಜಿಗಳನ್ನು ನೇರವಾಗಿ ಜಿಲ್ಲಾಧಿಕಾರಿಗಳಿಗೇ ಸಲ್ಲಿಸಬೇಕು. ಎನ್ಎ ಮಾಡಲು ಅಗತ್ಯವಿರುವ ಎಲ್ಲ ಪ್ರಕ್ರಿಯೆಗಳನ್ನು ಇಲಾಖೆಯೇ ಪೂರೈಸಲಿದೆ ಎಂದೂ ಸ್ಪಷ್ಟಪಡಿಸಿದರು.
ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿಯಲ್ಲಿ ಜಿಲ್ಲೆ ರಾಜ್ಯದಲ್ಲಿ 5ನೇ ಸ್ಥಾನದಲ್ಲಿದೆ. ಅರ್ಜಿಗಳ ಸ್ವೀಕರಿಸುವುದಕ್ಕೆ ಸಂಬಂಧಿಸಿದಂತೆ 22ನೇ ಸ್ಥಾನದಲ್ಲಿದೆ. ಜನರಲ್ಲಿ ಸಕಾಲ ಯೋಜನೆ ಕುರಿತಂತೆ ಜಾಗೃತಿ ಇಲ್ಲದಿರುವುದು ಇದಕ್ಕೆ ಕಾರಣ ಎಂದೂ ಅಭಿಪ್ರಾಯಪಟ್ಟರು.
2012ರ ಏಪ್ರಿಲ್ನಲ್ಲಿ ಸಕಾಲ ಯೋಜನೆ ಜಾರಿಗೆ ಬಂದಾಗಿನಿಂದ ಜಿಲ್ಲೆಯಲ್ಲಿ 8,65,506 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ ಈ ವರೆಗೆ 8,50,675 ಅರ್ಜಿಗಳು ವಿಲೇವಾರಿಯಾಗಿವೆ. ಅರ್ಜಿಗಳ ವಿಲೇವಾರಿಯಲ್ಲಿ ಶೇ 98.29ರಷ್ಟು ಸಾಧನೆ ಮಾಡಲಾಗಿದೆ ಎಂದು ವಿವರಿಸಿದರು.
ಮೆಕ್ಕೆಜೋಳ ಖರೀದಿ: ಮೆಕ್ಕೆಜೋಳ ಖರೀದಿ ಕೇಂದ್ರಗಳಲ್ಲಿ ಅವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೊಪ್ಪಳ, ಕುಷ್ಟಗಿ ಹಾಗೂ ಕುಕನೂರಿನಲ್ಲಿ ಇರುವ ಖರೀದಿ ಕೇಂದ್ರಗಳಲ್ಲಿ ಗುರುವಾರದಿಂದ ಹೆಚ್ಚುವರಿ ತೂಕದ ಯಂತ್ರಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.
ರೈತರು ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳವನ್ನು ತಂದ ದಿನವೇ ತೂಕ ಮಾಡಿ, ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ತಪ್ಪಿದಲ್ಲಿ ಮಾರನೇ ದಿನ ಸದರಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಅಲ್ಲದೇ, ಖರೀದಿಯಾದ ಮೆಕ್ಕೆಜೋಳಕ್ಕೆ ಸಂಬಂಧಿಸಿದಂತೆ 3–4 ದಿನಗಳ ಒಳಗಾಗಿ ಹಣ ಸಂದಾಯವಾಗುಂತೆ ಚೆಕ್ ವಿತರಣೆ ಮಾಡಲು ಸಹ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪರವಾನಗಿ: ಕೈಗಳಿಂದ ಕಲ್ಲುಗಳನ್ನು ಒಡೆದು ಮಾರಾಟ ಮಾಡುವವರಿಗೆ ಇನ್ನು ಮುಂದೆ ಪರವಾನಗಿಯನ್ನು ನೀಡಿ, ಕಾನೂನು ರೀತಿಯಲ್ಲಿಯೇ ಸದರಿ ವೃತ್ತಿಯನ್ನು ಮುಂದುವರಿಸಲು ಅನುಕೂಲಕ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
ಈ ವೃತ್ತಿಯಲ್ಲಿ ಇರುವವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಯಂತ್ರಗಳನ್ನು ಬಳಸಿ ಕಲ್ಲುಗಳನ್ನು ಒಡೆಯುತ್ತಿರಬಾರದು. ಈ ಸಂಬಂಧ ಬರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಿ ಪರವಾನಗಿ ನೀಡಲಾಗುವುದು. ಒಟ್ಟಾರೆ 3 ತಿಂಗಳ ಒಳಗಾಗಿ ಜಿಲ್ಲೆಯಲ್ಲಿ ಇಂತಹ ಕಸಬು ಮಾಡುವವರಿಗೆ ಪರವಾನಗಿ ನೀಡಿ, ಸಕ್ರಮಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಆದರೆ, ಜಿಲ್ಲೆಯಲ್ಲಿರುವ ಸ್ಮಾರಕಗಳಿಗೆ ಧಕ್ಕೆಯಾಗದಂತೆ ಈ ಕೆಲಸ ಕೈಗೊಳ್ಳುವಂತೆ ಸೂಚಿಸಿ, ನಿಗಾ ವಹಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವೈದ್ಯರ ನೇಮಕ: ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣವನ್ನು ತಗ್ಗಿಸಲು ಹಾಗೂ ಸುರಕ್ಷಿತ ಹೆರಿಗೆ ಖಾತರಿಪಡಿಸಲು ಜಿಲ್ಲೆಯಲ್ಲಿ ಮೂವರು ಪ್ರಸೂತಿ ತಜ್ಞರು, 6 ಜನ ಮಕ್ಕಳ ತಜ್ಞರು ಹಾಗೂ 5 ಜನ ಅರಿವಳಿಕೆ ತಜ್ಞರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಯೂನಿಸೆಫ್ನ ಹಣಕಾಸು ನೆರವಿನೊಂದಿಗೆ ಈ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಒಂದು ವಾರದ ಒಳಗಾಗಿ ನೇರ ಸಂದರ್ಶನದ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಕನಿಷ್ಠ ರೂ ಲಕ್ಷ ವೇತನ ನೀಡಲಾಗುವುದು. ಅನುಭವದ ಆಧಾರದ ಮೇಲೆ ರೂ1.25 ಲಕ್ಷ ವರೆಗೆ ವೇತನ ನೀಡಲು ಅವಕಾಶ ಇದೆ ಎಂದೂ ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.