ಬೆಂಗಳೂರು: `ಬೆಂಗಳೂರು ಎಂಡೋಸ್ಕೊಪಿಕ್ ಚಿಕಿತ್ಸಾ ತರಬೇತಿ ಮತ್ತು ಸಂಶೋಧನ ಕೇಂದ್ರವು ಜೀವರಸಾಯನಿಕ ಶಸ್ತ್ರ ಚಿಕಿತ್ಸೆಯ ಬಗ್ಗೆ ಚರ್ಚಿಸಲು ಫೆಬ್ರುವರಿ 12 ರಂದು ಜಯನಗರದ ಆರ್.ವಿ.ಕಾಲೇಜಿನಲ್ಲಿ ಸಭೆ ನಡೆಸಲಿದೆ~ ಎಂದು ಕೇಂದ್ರದ ಸಲಹಾ ವೈದ್ಯ ಎಂ. ರಮೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
`ಬ್ಯಾರಿಯಾಟ್ರಿಕ್ ಶಸ್ತ್ರಚಿಕಿತ್ಸಾ ವಿಧಾನವು ಮಧುಮೇಹ ನಿಯಂತ್ರಣ ಕ್ಷೇತ್ರದಲ್ಲಿ ನವೀನ ಪದ್ಧತಿಯಾಗಿದೆ. ಈ ಶಸ್ತ್ರ ಚಿಕಿತ್ಸಾ ಪದ್ಧತಿಯು ದೇಹದಲ್ಲಿನ ಕಾರ್ಬೋಹೈಡ್ರೈಟ್ ಮೇಲೆ ಅನುಕೂಲಕರ ಪರಿಣಾಮ ಬೀರುವುದು ಕಂಡುಬಂದಿದ್ದರಿಂದ ಇದನ್ನು ಈಗ ಜೀವರಸಾಯನಿಕ ಶಸ್ತ್ರ ಚಿಕಿತ್ಸೆಯೆಂದು ಕರೆಯಲಾಗುತ್ತಿದೆ~ ಎಂದು ವಿವರಿಸಿದರು.
`ಸಾಮಾನ್ಯ ತೂಕದ ವ್ಯಕ್ತಿಗಳಲ್ಲಿ ಕೂಡ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುವ ಸಲುವಾಗಿ ಅಧ್ಯಯನ ಮಾಡಲಾಗುತ್ತಿದೆ. ಇವುಗಳಲ್ಲಿ ಈಲಿಯಲ್ ಸ್ಥಳಾಂತರ ಚಿಕಿತ್ಸೆ ಮಧುಮೇಹವನ್ನು ನಿಯಂತ್ರಿಸುವಲ್ಲಿ ಹೆಚ್ಚಿನ ಭರವಸೆ ನೀಡುವ ಚಿಕಿತ್ಸಾ ಪದ್ಧತಿಯಾಗಿದೆ~ ಎಂದು ಮಾಹಿತಿ ನೀಡಿದರು.
ಡಾ.ಸುನಿಲ್ ಶರ್ಮಾ ಮಧುಮೇಹ ನಿಯಂತ್ರಣದಲ್ಲಿ ಜೀವರಸಾಯನಿಕ ಶಸ್ತ್ರ ಚಿಕಿತ್ಸೆಯ ಪರಿಣಾಮದ ಬಗ್ಗೆ ಮಾತನಾಡಲಿದ್ದಾರೆ ಎಂದರು.ಗೋಷ್ಠಿಯಲ್ಲಿ ಕರ್ನಾಟಕ ಮಧುಮೇಹ ಸಂಸ್ಥೆ ನಿರ್ದೇಶಕರಾದ ಡಾ.ಕೆ.ಆರ್.ನರಸಿಂಹನ್ ಶೆಟ್ಟಿ ಇದ್ದರು.