ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕೆರಕಲಮಟ್ಟಿಯ ಕೇದಾರನಾಥ ಸಕ್ಕರೆ ಕಾರ್ಖಾನೆಯ ಕಬ್ಬನ ಬಿಲ್ ಸಂದಾಯ ಕುರಿತು ಚರ್ಚಿಸಲು ಇದೇ 20ರಂದು ಕರೆಯಲಾಗಿದ್ದ ಸಭೆಯನ್ನು ಜಿಲ್ಲಾಧಿಕಾರಿ ರದ್ದುಪಡಿಸಿದ್ದಾರೆ.
ಕಾರ್ಖಾನೆ ಬಾಕಿ ಉಳಿಸಿಕೊಂಡ ಕಬ್ಬಿನ ಬಿಲ್ಅನ್ನು ಭೂ ಕಂದಾಯ ಬಾಕಿ ಎಂದು ವಸೂಲಿ ಮಾಡಲು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಆದೇಶ ನೀಡಿರುವ ಕಾರಣ ವಸೂಲಿ ಕಾರ್ಯ ಪ್ರಕ್ರಿಯೆ ನಡೆಯುತ್ತಿರುವ ಪ್ರಯುಕ್ತ ಸಭೆಯನ್ನು ರದ್ದುಪಡಿಸಿದೆ ಎಂದು ಜಿಲ್ಲಾಧಿಕಾರಿ ಎ.ಎಂ. ಕುಂಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂಬಾರಗೆ ಕಸಾಪ ಅಭಿನಂದನೆ: ಡಾ. ಚಂದ್ರಶೇಖರ ಕಂಬಾರ ಅವರಿಗೆ ದೇಶದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿ ಲಭಿಸಿರುವುದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲೆಯ ಸಾಹಿತಿಗಳು ಅಭಿನಂದನೆ ಸಲ್ಲಿದಿದ್ದಾರೆ.
ಕಂಬಾರ ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯುವ ಮೂಲಕ ಕನ್ನಡದ ಕೀರ್ತಿ ಮತ್ತಷ್ಟು ಹೆಚ್ಚಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಜಿ.ಕೋಠಿ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಪ್ರಕಾಶ್ ಖಾಡೆ ಅಭಿನಂದಿಸಿದ್ದಾರೆ.
ಕೆರೆಗೆ ನೀರು ಬಿಡಲು ಆಗ್ರಹ
ಬಾದಾಮಿ: ತಾಲ್ಲೂಕಿನಲ್ಲಿ ಮಳೆಯ ಕೊರತೆಯಿಂದ ಕೆಂದೂರು ಕೆರೆಯು ಬತ್ತಿದೆ. ಕೆರೆಯ ಸುತ್ತಲಿನ ಭಾವಿಗಳ ಅಂತರ್ಜಲ ಮಟ್ಟ ಕುಸಿದು ಕೃಷಿ ಚಟುವಟಿಕೆಗೆ ರೈತರಿಗೆ ತೊಂದರೆಯಾಗಿದೆ. ಕೆರೆಗೆ ಕೂಡಲೇ ನೀರು ಹರಿಸಬೇಕು ಎಂದು ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮಲಪ್ರಭಾ ನೀರನ್ನು ನದಿಗೆ ಹರಿಸುವ ಬದಲಾಗಿ ಕಾಲುವೆ ಮೂಲಕ ಕೆರೆಗಳಿಗೆ ಬಿಡಬೇಕು ಎಂದು ಗ್ರಾಪಂ ಸದಸ್ಯ ಹೇಮಂತ ದೊಡಮನಿ ಒತ್ತಾಯಿಸಿದ್ದಾರೆ.