ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಟು ಖರೀದಿ 5 ವರ್ಷ ಸ್ಥಗಿತಗೊಳಿಸಿ

Last Updated 22 ಜೂನ್ 2012, 19:30 IST
ಅಕ್ಷರ ಗಾತ್ರ

ಸಾಹಿತ್ಯ, ಕಲೆ,  ಸಂಗೀತ  ಹಿಂದಿನಿಂದಲೂ ರಾಜಾಶ್ರಯದಲ್ಲೇ ಬೆಳೆದುಬಂದಿವೆ. ಈಗ ಅದು ಸರ್ಕಾರದ  ಆಶ್ರಯದಲ್ಲಿ  ಮುಂದುವರಿಯುತ್ತಿದೆ. ಆದರೆ, ಜನಾಶ್ರಯದಲ್ಲಿ ಬೆಳೆದಾಗಲೇ ಸಾಹಿತ್ಯ ಸಂಸ್ಕೃತಿ ಮತ್ತಷ್ಟು ಶ್ರೀಮಂತವಾಗಲು ಮತ್ತು ಉಳಿಯಲು ಸಾಧ್ಯ ಎನ್ನುತ್ತಾರೆ ಬಳ್ಳಾರಿಯ ಲೋಹಿಯಾ ಪ್ರಕಾಶನದ ಮಾಲೀಕ ಸಿ.ಚನ್ನಬಸವಣ್ಣ.

ಬೆಂಗಳೂರಿನಿಂದ ದೂರ ಇದ್ದು ಹಲವಾರು ಮೌಲಿಕ ಪುಸ್ತಕಗಳನ್ನು ಪ್ರಕಾಶಿಸಿರುವ ಚನ್ನಬಸವಣ್ಣ ಪುಸ್ತಕ ಪ್ರಕಾಶನ ಮತ್ತು ಸರ್ಕಾರದ ಸಗಟು ಖರೀದಿ ನೀತಿಯ ಕುರಿತು  `ಪ್ರಜಾವಾಣಿ~ ಜತೆ ಮಾತನಾಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ರಾಜ್ಯಸರ್ಕಾರ ಪ್ರಕಾಶಕರ ಅನುಕೂಲಕ್ಕಾಗಿ `ಏಕಗವಾಕ್ಷಿ ಪದ್ಧತಿ~ಯನ್ನು ಜಾರಿಗೆ ತಂದು ವರ್ಷಕ್ಕೆ 300 ಪುಸ್ತಕಗಳು ಅಥವಾ ರೂ 1 ಲಕ್ಷ ಮೌಲ್ಯದ ಪುಸ್ತಕ ಖರೀದಿಸುವ ಯೋಜನೆ ಪ್ರಾರಂಭಿಸಿತ್ತು.

ಇದರಿಂದ ಪ್ರಕಾಶಕರಿಗೆ ನೆರವಾಗಿರುವುದು ನಿಜ. ಆದರೆ ಈ ಅವಕಾಶವನ್ನು ದುರುಪಯೋಗ ಮಾಡಿ ಕೊಂಡ ಹಲವಾರು ಪ್ರಕಾಶಕರು  ಐದಾರು ಸಂಸ್ಥೆಗಳನ್ನು ಹುಟ್ಟುಹಾಕಿ, ಎಲ್ಲ ಸಂಸ್ಥೆಗಳ ಪುಸ್ತಕಗಳೂ ಖರೀದಿಯಾಗುವಂತೆ ನೋಡಿ ಕೊಳ್ಳುತ್ತಿದ್ದಾರೆ.

ಖರೀದಿಯಾಗುವ ಸಂಖ್ಯೆಗೆ ಅನುಗುಣವಾಗಿ ಪುಸ್ತಕ ಪ್ರಕಟಿಸುವವರೂ ಇಲ್ಲಿದ್ದಾರೆ. ಸಮಿತಿ ಗುಣಮಟ್ಟ ಪರಿಗಣಿಸದೇ ಇರುವುದು ಇಂತಹ ಅನಾರೋಗ್ಯಕರ ಬೆಳವಣಿಗೆಗೆ ಕಾರಣ. ಸರ್ಕಾರದ ಸಗಟು ಖರೀದಿ ವ್ಯವಸ್ಥೆ ಆಮ್ಲಜನಕದಂತೆ ಕೆಲಸ ಮಾಡಬೇಕೇ ವಿನಾ, ಅದೇ ಆಹಾರ ವಾಗಬಾರದು. ಆಹಾರ ಕೆಲವರಿಗೆ ಮಾತ್ರ ದೊರೆತು ಅಜೀರ್ಣವಾದರೆ, ಇನ್ನು ಕೆಲವರು ಉಪವಾಸ ಸಾಯುವಂತಾಗಿದೆ ಎಂಬ ಅಭಿಪ್ರಾಯ ಅವರದ್ದು.

ಪುಸ್ತಕಗಳ ಪ್ರಕಟಣೆ ಒಂದು ಸಂಸ್ಕೃತಿ. ಅದು ಉದ್ಯಮವಲ್ಲ. ಪ್ರಕಾಶನ ಸಂಸ್ಥೆಗಳ ಕೆಲಸವನ್ನು `ಪುಸ್ತಕೋದ್ಯಮ~ ಎಂದು ಪರಿಗಣಿಸುವುದೇ ತಪ್ಪು. ಬೆಂಗಳೂರು ನಗರ ವೊಂದರಲ್ಲೇ ಐದು ಗ್ರಂಥಾಲಯ ವಲಯ ಗಳಿದ್ದು, ರಾಜಧಾನಿ ಕೇಂದ್ರಿತ ಹಾಗೂ ಮುಖ್ಯ ಕೇಂದ್ರಗಳಲ್ಲಿರುವ ಪ್ರಕಾಶಕರಿಗೆ ಆ ಗ್ರಂಥಾ ಲಯಗಳಿಗೆ ತಮ್ಮ ಪ್ರಕಟಣೆಗಳನ್ನು ಮಾರಾಟ ಮಾಡುವ ವಾಮಮಾರ್ಗಗಳು ಗೊತ್ತಿವೆ. ಪ್ರತಿ ವರ್ಷ ನೂರಾರು ಬಗೆಯ ಪುಸ್ತಕಗಳನ್ನು ಪ್ರಕಟಿಸುವ ಇಂಥವರ ನಿಯಂತ್ರಣಕ್ಕೆ ಕ್ರಮ ಅಗತ್ಯ ಎನ್ನುತ್ತಾರೆ ಚನ್ನಬಸವಣ್ಣ.

ಮಾರುಕಟ್ಟೆ    ಜಾಲವಿಲ್ಲ: ರಾಜ್ಯದಲ್ಲಿ  ಈಗ ಪ್ರಕಟವಾಗು ತ್ತಿರುವ ಶೇ 90ರಷ್ಟು ಪುಸ್ತಕ ಗಳು ಓದುಗರಿಗೆ ಲಭ್ಯವಾಗುವುದೇ ಇಲ್ಲ. ಸರ್ಕಾರ ಖರೀದಿಸುವ ಪುಸ್ತಕಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗೋದಾಮು ಗಳಲ್ಲೇ ಕೊಳೆಯುತ್ತವೆ. ಓದುಗರಿಗೆ ಅವುಗಳ ಲಭ್ಯತೆಯ ಬಗ್ಗೆ ಅರಿವೂ ಇಲ್ಲ. ಜಾಗೃತಿ ಮೂಡಿಸುವ ಕೆಲಸವನ್ನೂ ಸರ್ಕಾರ ಕೈಗೊಂಡಿಲ್ಲ.
 
ಪ್ರಮುಖವಾಗಿ ರಾಜ್ಯದಲ್ಲಿ ಪುಸ್ತಕಗಳ ಮಾರಾಟಕ್ಕೆ ಸಮರ್ಪಕ ಜಾಲವೇ (ನೆಟ್‌ವರ್ಕ್) ಇಲ್ಲ. ಪ್ರಮುಖ ಜಿಲ್ಲಾ ಕೇಂದ್ರ ಗಳಲ್ಲಿಯೇ ಹಿರಿಯ ಸಾಹಿತಿಗಳ ಪುಸ್ತಕಗಳು ಲಭ್ಯ ಇಲ್ಲ. ಪುಸ್ತಕ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಮಾರುಕಟ್ಟೆ ಜಾಲ ವಿಸ್ತರಿಸುವ ಮೂಲಕ ಜನರಿಗೆ ಪುಸ್ತಕಗಳು ಸುಲಭವಾಗಿ ದೊರೆ ಯುವಂತೆ ಮಾಡಿ ಅವರನ್ನು ಓದಿಗೆ ಹಚ್ಚುವ ಕೆಲಸ ಮಾಡಬೇಕು ಎನ್ನುವ ಆಶಯ ಅವರದ್ದು.

ಐದು ವರ್ಷ ಸ್ಥಗಿತವಾಗಲಿ: ತಂತ್ರಜ್ಞಾನದ ನೆರವಿನಿಂದಾಗಿ ಪುಸ್ತಕಗಳ ಓರಣ ಚೆನ್ನಾಗಿ ಕಾಣುವಂತಾಗಿದೆ. ಅದನ್ನೇ ಪ್ರಧಾನ ಎಂಬಂತೆ ಪರಿಗಣಿಸುವ ಸಮಿತಿ, ಒಳಗಿನ ಹೂರಣದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಖರೀದಿಗೆ ಶಿಫಾರಸು ಮಾಡುತ್ತಿದೆ.ಆಶ್ಚರ್ಯವೆಂದರೆ, ಕೆಲವರು ಸಗಟು ಮಾರಾಟದ ಉದ್ದೇಶಕ್ಕೆಂದೇ ಕೇವಲ ಮೂರು ಪುಸ್ತಕಗಳನ್ನು ಪ್ರಕಟಿಸಿ ಸರ್ಕಾರಕ್ಕೆ ಸಲ್ಲಿಸುತ್ತಾರೆ.

ಪ್ರಕ್ರಿಯೆ ಪೂರ್ಣಗೊಂಡು, ಒಂದೊಮ್ಮೆ ತಾವು ಪ್ರಕಟಿಸಿದ ಪುಸ್ತಕ ಆಯ್ಕೆಯಾದಲ್ಲಿ ಮಾತ್ರ 300 ಪ್ರತಿಗಳನ್ನು ಮುದ್ರಿಸಿ ನೀಡುವ ಚಾಣಾಕ್ಷತನವನ್ನೂ ಅಂಥವರು ಪ್ರದರ್ಶಿಸುತ್ತಾರೆ. ಸರ್ಕಾರದ ಸಗಟು ಖರೀದಿ ಪದ್ಧತಿ ಜಾರಿಯಲ್ಲಿ ಇರು ವುದರಿಂದಲೇ ಸಾಮಾಜಿಕ ಕಳಕಳಿ ಇಲ್ಲ ದವರೂ ಪ್ರಕಾಶಕರಾಗಿದ್ದಾರೆ. ಈ ಪದ್ಧತಿ ಯನ್ನು ಕನಿಷ್ಠ ಐದು ವರ್ಷಗಳ ಕಾಲ ಸ್ಥಗಿತ ಗೊಳಿಸಿದರೆ ನೈಜ ಕಾಳಜಿಯ ಪ್ರಕಾಶಕರು ಯಾರು ಎಂಬುದೂ ಸರ್ಕಾರಕ್ಕೇ ಗೊತ್ತಾಗು ತ್ತದೆ ಎನ್ನುವ ಚನ್ನಬಸವಣ್ಣ ಅವರ ಸಲಹೆಯನ್ನು ಸರ್ಕಾರ ಒಪ್ಪುವುದು ಕಷ್ಟ.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT