ನಾಗಪುರ: ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಕ್ರಿಕೆಟ್ ಸರಣಿಯ ಅಂತ್ಯಕ್ಕೆ ಸಚಿನ್ ತೆಂಡೂಲ್ಕರ್ ವಿದಾಯ ಹೇಳುತ್ತಾರೆ ಎಂಬ ವದಂತಿಗಳು ಎರಡು ದಿನಗಳಿಂದ ಹರಿದಾಡುತ್ತಿವೆ. ಆದರೆ ಈ ಬಗ್ಗೆ ಸಚಿನ್ ಸೇರಿದಂತೆ ಯಾರೂ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ.
ತೆಂಡೂಲ್ಕರ್ ಅವರ ಪತ್ನಿ ಅಂಜಲಿ ಮುಂಬೈನಿಂದ ಶನಿವಾರ ಸಂಜೆ ಇದ್ದಕ್ಕಿದ್ದಂತೆ ಇಲ್ಲಿಗೆ ಆಗಮಿಸ್ದ್ದಿದು ಆ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಅವರು ಭಾನುವಾರ ವಿವಿಐಪಿ ಗ್ಯಾಲರಿಯಲ್ಲಿ ಕುಳಿತು ನಾಲ್ಕನೇ ದಿನದಾಟ ವೀಕ್ಷಿಸಿದರು. ಅಂಜಲಿ ಜೊತೆ ಆರ್.ಅಶ್ವಿನ್ ಅವರ ಪತ್ನಿ ಪ್ರೀತಿ ಕೂಡ ಇದ್ದರು.
ಸಚಿನ್ ವಿದಾಯ ಹೇಳುತ್ತಾರೆ ಎಂಬ ಊಹಾಪೋಹ ಈ ಪಂದ್ಯದ ಫಲಿತಾಂಶಕ್ಕಿಂತ ಹೆಚ್ಚಿನ ಕಾವು ಪಡೆದುಕೊಂಡಿದೆ. ಮುಂಬೈನಿಂದ ಸುದ್ದಿ ವಾಹಿನಿಗಳ ಕೆಲ ವರದಿಗಾರರು ಕೂಡ ಎರಡು ದಿನಗಳಿಂದ ಕಿತ್ತಳೆ ನಗರಿಗೆ ಆಗಮಿಸುತ್ತಿದ್ದಾರೆ.
ಈ ವಿಷಯ ಪತ್ರಕರ್ತರ ವಲಯದಲ್ಲಿ ಚರ್ಚೆ ಕಾರಣವಾಗಿದೆ. ಮುಂಬೈಗೆ ತೆರಳಿದ ಮೇಲೆ ಸಚಿನ್ ವಿದಾಯ ಹೇಳಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ನಿಖರ ಮಾಹಿತಿ ಸಿಗುತ್ತಿಲ್ಲ.