ನವದೆಹಲಿ (ಪಿಟಿಐ): ಪ್ರತಿಷ್ಠಿತ `ಭಾರತ ರತ್ನ~ ಪ್ರಶಸ್ತಿಗೆ ಈ ವರ್ಷ ಕೇಂದ್ರ ಸರ್ಕಾರ ಯಾರನ್ನೂ ಪರಿಗಣಿಸಿಲ್ಲ. ಆದರೆ ಸಚಿನ್ ತೆಂಡೂಲ್ಕರ್ ಅವರ ಹೆಸರನ್ನು `ಭಾರತ ರತ್ನ~ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡದೇ ಇದ್ದದ್ದು ಅಚ್ಚರಿ ಮೂಡಿಸಿದೆ.
ಹಾಗಾಗಿ ಕ್ರೀಡಾ ಸಚಿವಾಲಯವು ಹಾಕಿ ಮಾಂತ್ರಿಕ ಧ್ಯಾನ್ಚಂದ್, ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಶೂಟರ್ ಅಭಿನವ್ ಬಿಂದ್ರಾ ಹಾಗೂ ಪರ್ವತಾರೋಹಿ ತೇನ್ಸಿಂಗ್ ನೊರ್ಗೆ (ಮೌಂಟ್ ಎವರೆಸ್ಟ್ ಶಿಖರವೇರಿದ ಮೊದಲ ಭಾರತೀಯ) ಅವರ ಹೆಸರನ್ನು ಮಾತ್ರ ಗೃಹ ಸಚಿವಾಲಯದ ಮುಂದಿಟ್ಟಿದೆ.
`ಕ್ರೀಡಾ ಸಚಿವಾಲಯಕ್ಕೆ ಶಿಫಾರಸು ಮಾಡಿದ ಹೆಸರನ್ನು ನಾವು ಗೃಹ ಸಚಿವಾಲಯಕ್ಕೆ ನೀಡಿದ್ದೇವೆ~ ಎಂದು ಕ್ರೀಡಾ ಸಚಿವ ಅಜಯ್ ಮಾಕನ್ ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್, `ಈ ಪ್ರತಿಷ್ಠಿತ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಬೇಕೇ ಎಂಬುದು ನನಗೆ ಗೊತ್ತಿಲ್ಲ. ಆದರೆ ಇದು ಸರ್ಕಾರದ ಜವಾಬ್ದಾರಿ~ ಎಂದಿದ್ದಾರೆ.