ಮುಂಬೈ (ಪಿಟಿಐ): ಸಚಿನ್ ತೆಂಡೂಲ್ಕರ್ ಸ್ಥಾನ ತುಂಬಬಲ್ಲ ಸಮರ್ಥ ಆಟಗಾರ ಭಾರತದಲ್ಲಿ ಈಗ ಯಾರೂ ಇಲ್ಲ ಎಂದು ಮಾಜಿ ಆಟಗಾರ ದಿಲೀಪ್ ವೆಂಗ್ಸರ್ಕರ್ ಹೇಳಿದ್ದಾರೆ. `ನಿವೃತ್ತಿ ಪ್ರಕಟಿಸಲು ಸಮಯವಾಗಿದೆ~ ಎಂಬ ಸಲಹೆಯನ್ನು ಸಚಿನ್ಗೆ ನೀಡುವ ಅಗತ್ಯವೂ ಇಲ್ಲ ಎಂದಿದ್ದಾರೆ. ಈ ಮೂಲಕ ಅವರು ಮಾಜಿ ಆಲ್ರೌಂಡರ್ ಕಪಿಲ್ ದೇವ್ ಅಭಿಪ್ರಾಯವನ್ನು ಟೀಕಿಸಿದ್ದಾರೆ.
`ವಿದಾಯ ಹೇಳುವ ಕಾಲ ಸನ್ನಿಹಿತವಾಗಿದೆ ಎಂಬ ಸಲಹೆಯನ್ನು ಸಚಿನ್ ಅವರಂತಹ ಮಹಾನ್ ಆಟಗಾರನಿಗೆ ನೀಡುವ ಅಗತ್ಯವಿಲ್ಲ. ಕ್ರಿಕೆಟ್ನಿಂದ ಯಾವಾಗ ದೂರವಾಗಬೇಕು ಎಂಬ ನಿರ್ಧಾರವನ್ನು ಅವರೇ ಕೈಗೊಳ್ಳಲಿ~ ಎಂದು ವೆಂಗ್ಸರ್ಕರ್ ಗುರುವಾರ ಹೇಳಿದರು.
ಸಚಿನ್ ವಿಶ್ವಕಪ್ ಟೂರ್ನಿಯ ಬೆನ್ನಲ್ಲೇ ನಿವೃತ್ತಿ ಪ್ರಕಟಿಸಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯವನ್ನು ಕಪಿಲ್ ಕೆಲದಿನಗಳ ಹಿಂದೆ ವ್ಯಕ್ತಪಡಿಸಿದ್ದರು. ಅದೇ ರೀತಿ ಸಚಿನ್ ವಿದಾಯ ಹೇಳಬೇಕೇ ಎಂಬುದು ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವೆಂಗ್ಸರ್ಕರ್, `ಈ ವಯಸ್ಸಿನಲ್ಲೂ ಸಚಿನ್ ಭಾರತ ತಂಡದ ಇತರ ಆಟಗಾರರಂತೆಯೇ ಫಿಟ್ನೆಸ್ ಹೊಂದಿರುವರು~ ಎಂದಿದ್ದಾರೆ.
`ಭಾರತ ತಂಡದ ಬೆಂಚ್ ಸ್ಟ್ರೆಂತ್ ಕೂಡಾ ಉತ್ತಮವಾಗಿಲ್ಲ. ಸಚಿನ್ ಸ್ಥಾನ ತುಂಬಬಲ್ಲ ಒಬ್ಬನೇ ಒಬ್ಬ ಆಟಗಾರನನ್ನು ಈಗ ಭಾರತದಲ್ಲಿ ಕಾಣಲು ಸಾಧ್ಯವಿಲ್ಲ. ತಂಡದ ಮೇಲೆ ಅವರು ಹೊಂದಿರುವ ಬದ್ಧತೆಯನ್ನು ಪ್ರಶ್ನಿಸುವ ಹಾಗಿಲ್ಲ. ಅವರ ಸಾನಿಧ್ಯ ಹೊಸ ಬದಲಾವಣೆಗೆ ಕಾರಣವಾಗುತ್ತದೆ~ ಎಂದು ವೆಂಗ್ಸರ್ಕರ್ ನುಡಿದಿದ್ದಾರೆ.