ನವದೆಹಲಿ/ ಲಖನೌ(ಪಿಟಿಐ): ಸ್ವಯಂಸೇವಾ ಸಂಸ್ಥೆಯ ಹಣ ದುರುಪಯೋಗದ ಆರೋಪ ಎದು ರಿಸುತ್ತಿರುವ ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರಿಂದ ರಾಜೀನಾಮೆ ಪಡೆಯುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ತಳ್ಳಿ ಹಾಕಿವೆ.
`ಈ ಪ್ರಕರಣ ಕುರಿತಂತೆ ಸಚಿವರ ರಾಜೀನಾಮೆ ಕೇಳುವ ಪ್ರಶ್ನೆಯೇ ಇಲ್ಲ~ ಎಂದು ಹೇಳುವ ಮೂಲಕ ಕೇಂದ್ರ ಸಚಿವರಾದ ಅಂಬಿಕಾ ಸೋನಿ ಮತ್ತು ಗುಲಾಂ ನಬಿ ಅಜಾದ್ ಅವರು ಸಚಿವರ ರಾಜೀನಾಮೆ ಸುತ್ತ ಎದ್ದಿದ್ದ ಊಹಾಪೋಹಗಳಿಗೆ ಸೋಮವಾರ ತೆರೆ ಎಳೆದಿದ್ದಾರೆ.
ಮಾಧ್ಯಮಕ್ಕೆ ಸಂಬಂಧಿಸಿದ ಸಚಿವರ ತಂಡದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಸಂಪುಟದಿಂದ ಖುರ್ಷಿದ್ ಕೈಬಿಡುವ ಪ್ರಶ್ನೆಯೇ ಉದ್ಭವಿಸಿಲ್ಲ~ ಎಂದು ಸ್ಪಷ್ಟವಾಗಿ ಹೇಳಿದರು. ಇದೇ ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಸಲ್ಮಾನ್ ಖುರ್ಷಿದ್ ಮಾತ್ರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು.
ದಾಖಲಾತಿ ಸಂಗ್ರಹ: ಏತನ್ಮಧ್ಯೆ, ಉತ್ತರ ಪ್ರದೇಶ ಆರ್ಥಿಕ ಅಪರಾಧ ವಿಭಾಗದ ಪೊಲೀಸರು ಲಖನೌದಲ್ಲಿ ವಿವಿಧ ಇಲಾಖೆಗಳಿಂದ ದಾಖಲೆ ಸಂಗ್ರಹಿಸಲು ಆರಂಭಿಸಿದ್ದಾರೆ.