ಮಂಗಳೂರು: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್ ಅವರ ಬೆಂಗಾವಲು ವಾಹನ ಮಂಗಳವಾರ ಬೆಳಿಗ್ಗೆ ಪಣಂಬೂರು ನಗರ ಹೊರವಲಯ ಬಂದರು ಆಸ್ಪತ್ರೆ ಬಳಿ ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟರು.
ಬಂಟ್ವಾಳ ತಾಲ್ಲೂಕಿನ ಮುಡಿಪು ಕುರ್ನಾಡು ಕಂಬಳಪದವು ನಿವಾಸಿ ತನಿಯಪ್ಪ ಮೂಲ್ಯ ಎಂಬವರ ಪುತ್ರ ಚಂದ್ರಹಾಸ್ (40) ಮೃತಪಟ್ಟವರು. ಅವರು ಪಣಂಬೂರಿನ ಸಿಪಿಸಿಎಲ್ ಕಂಪೆನಿಯಲ್ಲಿ ಹಲವು ವರ್ಷಗಳಿಂದ ಕೂಲಿ ಕಾರ್ಮಿಕರಾಗಿದ್ದರು.
ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಂಗಳವಾರ ಬೆಳಿಗ್ಗೆ ಮೀನಕಳಿಯ ದೇವಸ್ಥಾನಕ್ಕೆ ಭೇಟಿ ನೀಡಿ ಸುಳ್ಯಕ್ಕೆ ತೆರಳಲು ಮೇರಿಹಿಲ್ ಹೆಲಿಪ್ಯಾಡ್ಗೆ ತೆರಳುವ ವೇಳೆ ಜತೆಗೆ ಸಚಿವ ಪಾಲೆಮಾರ್ ಮತ್ತು ಅವರ ಬೆಂಗಾವಲು ವಾಹನವೂ ತೆರಳುತ್ತಿದ್ದವು. ಕೆಲಸಕ್ಕೆ ತೆರಳುತ್ತಿದ್ದ ಚಂದ್ರಹಾಸ್ ಗಡಿಬಿಡಿಯಲ್ಲಿ ರಸ್ತೆ ದಾಟುವ ವೇಳೆ ವಾಹನ ಡಿಕ್ಕಿ ಹೊಡೆಯಿತು. ಗಂಭೀರ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಕೊನೆಯುಸಿರೆಳೆದರು.
ಸಚಿವರ ಬೆಂಗಾವಲು ವಾಹನವನ್ನು ಅರುಣ್ ಆಳ್ವ ಎಂಬವರು ಚಲಾಯಿಸುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹ ಹಸ್ತಾಂತರಿಸಲಾಯಿತು ಎಂದು ಪ್ರಕರಣ ದಾಖಲಿಸಿಕೊಂಡಿರುವ ಪಣಂಬೂರು ಪೊಲೀಸರು ತಿಳಿಸಿದ್ದಾರೆ.