ಗಜೇಂದ್ರಗಡ (ಗದಗ ಜಿಲ್ಲೆ): ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ಅವರ ನಿವಾಸ ಹಾಗೂ ಇಲ್ಲಿಯ ಪ್ರತಿಷ್ಠಿತ ಆಸ್ಪತ್ರೆಯೊಂದರ ಮೇಲೆ ಶುಕ್ರವಾರ ಆದಾಯ ತೆರಿಗೆ ಅಧಿಕಾರಿಗಳು ಏಕ ಕಾಲಕ್ಕೆ ದಾಳಿ ನಡೆಸಿದ್ದಾರೆ.
ಆರೇಳು ವಾಹನಗಳಲ್ಲಿ ಬಂದಿಳಿದ 15 ರಿಂದ 20 ಜನ ಅಧಿಕಾರಿಗಳನ್ನು ಒಳಗೊಂಡ ತಂಡವು ಮುಂಜಾನೆ 11ರ ಸುಮಾರಿಗೆ ಸಚಿವ ಕಳಕಪ್ಪ ಬಂಡಿ ಅವರ ಇಲ್ಲಿಯ `ವನಶ್ರೀ' ನಿವಾಸ ಸೇರಿದಂತೆ `ವನಶ್ರೀ' ಪೆಟ್ರೋಲ್ ಬಂಕ್, `ವನಶ್ರೀ' ಟ್ರೇಡರ್ಸ್ ಹಾಗೂ `ವನಶ್ರೀ' ಡ್ರಗ್ ಹೌಸ್, `ವನಶ್ರೀ' ಟಿಂಬರ್ ಯಾರ್ಡ್ ಮತ್ತು ಆಸ್ಪತ್ರೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದೆ.
ಸಾಯಂಕಾಲ 7 ಗಂಟೆವರೆಗೂ ದಾಖಲೆ ಹುಡುಕಾಟದಲ್ಲಿ ಈ ತಂಡ ತೊಡಗಿತ್ತು.
ಸಚಿವ ಬಂಡಿ ಹಾಗೂ ಸಹೋದರ ಸಿದ್ದಣ್ಣ ಬಂಡಿ ಅವರ ಒಡೆತನಕ್ಕೆ ಸೇರಿದ ಎಲ್ಲ ವ್ಯವಹಾರ ಕೇಂದ್ರಗಳನ್ನು ಎಡಬಿಡದೆ ತಡಕಾಡಿದ ಅಧಿಕಾರಿಗಳಿಗೆ ಯಾವುದೇ ಮಹತ್ವದ ದಾಖಲೆಗಳು ದೊರೆತಿಲ್ಲ.ಆದರೆ ಆಸ್ಪತ್ರೆ ಮೇಲೆ ದಾಳಿ ನಡೆಸಿದ 10 ಜನ ಅಧಿಕಾರಿಗಳ ತಂಡಕ್ಕೆ ಮಹತ್ವದ ದಾಖಲೆಗಳು ದೊರೆತಿವೆ ಎನ್ನಲಾಗಿದೆ. ಆಸ್ಪತ್ರೆಯ ಮಾಲೀಕರ ನಿವಾಸದ ಮೇಲೂ ದಾಳಿ ಮುಂದುವರಿಸಿದ ಅಧಿಕಾರಿಗಳು ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ