ಹೊನ್ನಾಳಿ (ದಾವಣಗೆರೆ ಜಿಲ್ಲೆ): ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರಿಗೆ ಬೆದರಿಕೆ ಪತ್ರವೊಂದು ಸ್ಪೀಡ್ಪೋಸ್ಟ್ ಮೂಲಕ ಶನಿವಾರ ಬಂದಿದೆ. ತಮಗೆ ರೂ. 20 ಲಕ್ಷ ನೀಡದಿದ್ದರೆ, ಸಚಿವರ ಬೆಂಗಳೂರು ಮತ್ತು ಹೊನ್ನಾಳಿಯ ನಿವಾಸಗಳನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಅದರಲ್ಲಿ ಬೆದರಿಕೆ ಹಾಕಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಪೇಟೆ ಹಕ್ಕಲ್ನಿಂದ ಟಿ. ಮೋಹನ್ಕುಮಾರ್ ಎಂಬ ವ್ಯಕ್ತಿ ಪತ್ರವನ್ನು ಶುಕ್ರವಾರ ಸ್ಪೀಡ್ಪೋಸ್ಟ್ ಮಾಡಿದ್ದಾರೆ. ಸಚಿವರ ಇಲ್ಲಿನ ನಿವಾಸಕ್ಕೆ ಶನಿವಾರ ಬಂದ ಈ ಪತ್ರವನ್ನು ಮನೆಯಲ್ಲಿದ್ದ ಮಹಿಳೆಯರು ಓದಿ ಸಚಿವರ ಸಹೋದರರಿಗೆ ತೋರಿಸಿದರು. ತಕ್ಷಣ ಸಚಿವರ ಆಪ್ತ ಸಹಾಯಕರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು.
ತಾವು ಎಲ್ಟಿಟಿಇ ಸಂಘಟನೆಗೆ ಸೇರಿದವರಾಗಿದ್ದು, ತಮ್ಮ ಸಂಘಟನೆಗೆ ಈಗ ಹಣದ ಆವಶ್ಯಕತೆ ಇದೆ. ತಮಗೆ ಈಗ ತುರ್ತಾಗಿ ರೂ. 20 ಲಕ್ಷ ಬೇಕಾಗಿದೆ. ಹಣವನ್ನು ಕಪ್ಪು ಬ್ಯಾಗ್ನಲ್ಲಿ ಅ. 12 ರ ರಾತ್ರಿ 10 ಗಂಟೆಯ ವೇಳೆಗೆ ಹೊನ್ನಾಳಿಯ ಶಿವಮೊಗ್ಗ ರಸ್ತೆಯಲ್ಲಿರುವ ಎಪಿಎಂಸಿ ಸಮೀಪದ ಚೌಡೇಶ್ವರಿ ದೇವಸ್ಥಾನದ ಮೇಲೆ ಇಟ್ಟು ಹೋಗಬೇಕು. ಇಲ್ಲದಿದ್ದರೆ ಸಚಿವರ ಬೆಂಗಳೂರು ಮತ್ತು ಹೊನ್ನಾಳಿಯ ನಿವಾಸಗಳನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಪತ್ರದಲ್ಲಿ ಎಚ್ಚರಿಸಲಾಗಿದೆ.