ಬೆಂಗಳೂರು: `ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎಂಬ ಅನರ್ಥಕಾರಿ ಹೇಳಿಕೆ ನೀಡಿರುವ ಸಚಿವ ಉಮೇಶ ಕತ್ತಿ ಆ ಸ್ಥಾನದಲ್ಲಿ ಕೂಡಲು ಅರ್ಹರಲ್ಲ~ ಎಂದು ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಆಕ್ರೋಶದಿಂದ ಹೇಳಿದರು.
ನಗರದಲ್ಲಿ ಶನಿವಾರ ನಡೆದ `ನಮ್ಮ ಮೆಟ್ರೊ~ ರೈಲು ಸಂಚಾರದ ಮೊದಲ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ವರದಿಗಾರರ ಜೊತೆ ಮಾತನಾಡಿದರು.
`ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿರುವುದು ರಾಜ್ಯವನ್ನು ಒಡೆಯಲು ಅಲ್ಲ. ಅದನ್ನು ಕಟ್ಟಲು ಬಳಸಿದ ದುಡ್ಡು ಅಖಂಡ ಕರ್ನಾಟಕದ ಜನರಿಗೆ ಸೇರಿದ್ದು. ಬಾಯಿಗೆ ಬಂದಂತೆ ಕಿರುಚುವ ಕತ್ತಿ ಇದನ್ನು ಅರ್ಥ ಮಾಡಿಕೊಳ್ಳಬೇಕು~ ಎನ್ನುವಾಗ ಅವರ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿತ್ತು. `ಇಂತಹ ಒಣ ಕಾರುಬಾರು ಮಾಡದೆ ಸುಮ್ಮನಿದ್ದರೆ ಕತ್ತಿಗೆ ಒಳಿತು. ಯಾವುದೇ ಕಾರಣಕ್ಕೂ ರಾಜ್ಯವನ್ನು ಒಡೆಯುವ ಮಾತಿಗೆ ಅವಕಾಶ ಇಲ್ಲ~ ಎಂದರು.