ಕೊಪ್ಪ: ದೇಶದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಉಳಿಗಾಲವಿಲ್ಲ. ದೇಶದ ಬಹುತೇಕ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಜನತೆ ಆರಿಸಿದ್ದು ರಾಜ್ಯದಲ್ಲಿ ಬಿ.ಎಸ್.ಆರ್.ಕ್ರಾಂಗೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ ಎಂದು ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮಲು ಹೇಳಿದರು.
ಇಲ್ಲಿನ ಬಸ್ನಿಲ್ದಾಣದಲ್ಲಿ ಸಂಕಲ್ಪ ಯಾತ್ರೆ ಅಂಗ ವಾಗಿ ಪಕ್ಷ ಬುಧವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡುತಿದ್ದರು.
ಹಗರಣಗಳ ಸರಮಾಲೆ ಹೊತ್ತ ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ, ಮಂತ್ರಿಪಟ್ಟಕ್ಕಾಗಿ ಪೈಪೋಟಿ ನಡೆದಿದೆ. ಕಾಟಾಚಾರದ ಅಧಿವೇಶನ ನಡೆದಿದ್ದು ಸರ್ಕಾರ ಜೀವಂತವಾಗಿಲ್ಲವೆಂದು ದೂರಿದರು.
ರಾಜ್ಯದಲ್ಲಿ ಬರಗಾಲದಿಂದಾಗಿ ರೂ.4500 ಕೋಟಿಗೂ ಅಧಿಕ ಹಾನಿ ಸಂಭವಿಸಿದ್ದರೂ ಕೇಂದ್ರ ಸರ್ಕಾರ ಕೇವಲ ರೂ.500ಕೋಟಿ ಒದಗಿಸಿ ಜನರ ಬಗ್ಗೆ ಕಾಳಜಿ ಇಲ್ಲ ಎಂಬುದನ್ನು ತೋರಿಸಿದೆ ಎಂದ ಅವರು, ಅಡಿಕೆ ಬೆಳೆಗಾರರ ಸಮಸ್ಯೆ, ಹುಲಿಯೋಜನೆ ಮೊದ ಲಾದ ಸಮಸ್ಯೆಗಳನ್ನು ಪ್ರಸ್ತಾಪಿಸಿದರು.
ಶೃಂಗೇರಿಯಿಂದ ಪಟ್ಟಣಕ್ಕೆ ಆಗಮಿಸಿದ ಶ್ರೀರಾಮಲು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಟಿ ರಕ್ಷಿತಾ, ಬಿ.ಎಸ್.ಆರ್.ಕಾಂಗ್ರೆಸ್ ಕ್ಷೇತ್ರಾಧ್ಯಕ್ಷ ಗುಣವಂತೆ ಪೂರ್ಣೇಶ್, ಕಡೂರಿನ ಶಂಕರ್, ಶ್ರೀರಾಮ, ಸುನೀಲ್ಶೆಟ್ಟಿ, ರಿಯಾಜ್ ಮೊದಲಾದವರು ಸಮಾವೇಶದಲ್ಲಿ ಇದ್ದರು.