ಬೆಂಗಳೂರು: `ಮೊದಲು ಸಚಿವರೆಲ್ಲ ತಮ್ಮ ವಾಹನಗಳ ಗಾಜುಗಳಿಗೆ ಅಳವಡಿಸಿರುವ ಕೂಲಿಂಗ್ ಪೇಪರ್ (ಫಿಲ್ಮ್) ಅನ್ನು ತೆಗೆಸಬೇಕು. ಆಗ ಮಾತ್ರ ನಾವು ಪ್ರಶ್ನೆ ಮಾಡದೆ ನಮ್ಮ ವಾಹನಗಳ ಕೂಲಿಂಗ್ ಪೇಪರ್ ತೆಗೆಯುತ್ತೇವೆ~ ಎಂದು ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ಸ್ ಅಸೋಸಿಯೇಷನ್ನ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಚಿವರು ತಮ್ಮ ನಡೆಯಿಂದ ಇತರ ಪ್ರಜೆಗಳಿಗೆ ಮಾದರಿಯಾಗಬೇಕು. ಅವರು ಸುಪ್ರೀಂ ಕೋರ್ಟಿನ ಆದೇಶದಂತೆ ನಡೆದರೆ ಜನ ಸಾಮಾನ್ಯರಾದ ನಾವು ಕೂಡ ಅದನ್ನು ಒಪ್ಪಿಕೊಳ್ಳುತ್ತೇವೆ~ ಎಂದರು.
`ರಾಜ್ಯ ಸರ್ಕಾರವು ಲಾರಿ, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್, ಟೆಂಪೋ ಸೇರಿದಂತೆ ಎಲ್ಲ ವಾಣಿಜ್ಯ ವಾಹನಗಳಿಗೆ ವೇಗ ನಿಯಂತ್ರಕವನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇದು ನೆರೆ ರಾಜ್ಯದ ವಾಹನಗಳಿಗೂ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ಸೂಚಿಸಿದೆ~ ಎಂದರು.
`ಈ ಆದೇಶದ ಅನ್ವಯ ದೇಶದೆಲ್ಲೆಡೆಯಿಂದ ವೇಗ ನಿಯಂತ್ರಕ ಅಳವಡಿಸದ ಯಾವುದೇ ವಾಣಿಜ್ಯ ವಾಹನ ರಾಜ್ಯದೊಳಗೆ ಬರುವಂತಿಲ್ಲ ಹಾಗೂ ರಾಜ್ಯದಿಂದ ಹೊರ ಹೋಗುವಂತಿಲ್ಲ. ಈ ರೀತಿಯ ಅವೈಜ್ಞಾನಿಕ ನಿರ್ಧಾರದ ಬಗೆಗಿನ ಸಮಸ್ಯೆಳನ್ನು ಚರ್ಚಿಸಲು ಮೇ 13 ರಂದು ಬೆಂಗಳೂರಿನ ಚಾಮರಾಜಪೇಟೆಯ ಸಿಟಿ ಇನ್ಸ್ಟಿಟ್ಯೂಟ್ ಸಭಾಂಗಣದಲ್ಲಿ ರಾಜ್ಯಮಟ್ಟದ ಸಾಗಣೆದಾರರ ಸಭೆಯನ್ನು ಹಮ್ಮಿಕೊಂಡಿದೆ~ ಎಂದು ಹೇಳಿದರು.