ಔರಾದ್: ಸದನದಲ್ಲಿ ಲೈಂಗಿಕ ದೃಶ್ಯ ವೀಕ್ಷಿಸಿದ ಸಚಿವರಿಬ್ಬರ ಶಾಸಕತ್ವ ರದ್ದು ಮಾಡುವಂತೆ ಆಗ್ರಹಿಸಿ ಪ್ರಜಾರಾಜ್ಯ ಸಂಘರ್ಷ ಸಮಿತಿ ಮತ್ತು ಎಸ್ಎಫ್ಐ ಕಾರ್ಯಕರ್ತರು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ ಇಲ್ಲಿಯ ಕನ್ನಡಾಂಬೆ ವೃತ್ತದ ಬಳಿ ಸೇರಿದ ಪ್ರಜಾರಾಜ್ಯ ಸಂಘರ್ಷ ಸಮಿತಿಯ ಸುಧಾಕರ ಕೊಳ್ಳೂರ್, ರಾಜು ಕೋಟೆ, ಅಶೋಕ, ರವೀಂದ್ರ ಶರ್ಮಾ, ಉಮಾಕಾಂತ ಸೋನೆ, ರಾಜು ತುಳಜಾಪುರ, ಹಾವಯ್ಯ ಸ್ವಾಮಿ ಮಿಂಚಿನ ಪ್ರತಿಭಟನೆ ನಡೆಸಿ ಸಚಿವರ ಕೃತ್ಯ ತೀವ್ರವಾಗಿ ಖಂಡಿಸಿದರು.
ಉಚ್ಚ ಸಂಸ್ಕೃತಿ ಬಗ್ಗೆ ಮಾತನಾಡುವ ಬಿಜೆಪಿ ಶಾಸಕರು ಸನದಲ್ಲಿ ಬಹಿರಂಗವಾಗಿ ಲೈಂಗಿಕ ದೃಶ್ಯ ನೋಡುವ ಮೂಲಕ ರಾಜ್ಯದ ಮಾನ ಹರಾಜು ಮಾಡಿದ್ದಾರೆ. ಇಂಥ ಮಾನಗೇಡಿ ಶಾಸಕರನ್ನು ಕೂಡಲೇ ರಾಜ್ಯದಿಂದ ಗಡಿಪಾರು ಮಾಡುವಂತೆ ಪ್ರತಿಭಟನಾ ನಿರತರು ದೂರಿದರು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಕೆಲ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಮತ್ತೆ ಕೆಲವರು ಲೈಂಗಿಕತೆಯಂತಹ ಕೆಟ್ಟ ಕೆಲಸದಿಂದ ಸರ್ಕಾರದ ವರ್ಚಸಿಗೆ ಧಕ್ಕೆ ತರುತ್ತಿದ್ದಾರೆ. ಇಂಥ ಸರ್ಕಾರ ಅಧಿಕಾರದಲ್ಲಿ ಒಂದು ಕ್ಷಣ ಮುಂದುವರಿಯಬಾರದು ಎಂದು ಆಗ್ರಹಿಸಿದರು. ಇದೇ ವೇಳೆ ಸಚಿವ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ: ಪ್ರತ್ಯೇಕ ಪ್ರತಿಭಟನೆ ನಡೆಸಿದ ಎಸ್ಎಫ್ಐ ಕಾರ್ಯಕರ್ತರು, ರಾಮ ರಾಜ್ಯ ಕಟ್ಟುಲು ಹೊರಟ ಬಿಜೆಪಿ ಸರ್ಕಾರದ ಬಣ್ಣ ಈಗ ಬಯಲಾಗಿದೆ ಎಂದು ದೂರಿದರು. ಸಚಿವರಿಬ್ಬರ ಈ ನೀಚ ಕೃತ್ಯದಿಂದ ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಾಜ್ಯಕ್ಕೆ ಅವಮಾನವಾಗಿದೆ. ಈ ಇಬ್ಬರು ಸಚಿವರನ್ನು ಕೇವಲ ಶಾಸಕ ಸ್ಥಾನದಿಂದ ಅಷ್ಟೇ ಅಲ್ಲ ಪಕ್ಷದಿಂದಲೂ ಉಚ್ಛಾಟಿಸುವಂತೆ ಆಗ್ರಹಿಸಿದರು.
ಎಸ್ಎಫ್ಐ ಪ್ರಮುಖ ಶಿವಕುಮಾರ ಕಾಂಬಳೆ, ಅಶೋಕ ಕೊಳ್ಳೂರ್, ಸುಧಾಕರ ಮೊಕ್ತೆದಾರ, ಸೂರ್ಯಕಾಂತ ರಕ್ಷಾಳ, ದತ್ತಾತ್ರಿ ಮಸ್ಕಲ್ ಬರೆದ ಮನವಿಪತ್ರ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಕಳಹಿಸಿದರು.