ಬೆಂಗಳೂರು: ಪಕ್ಷದ ಕಾರ್ಯಕ್ರಮಗಳಲ್ಲಿ ಭಾಷಣ ಮುಗಿಸಿ ತಕ್ಷಣವೇ ನಿರ್ಗಮಿಸುವ ಸಚಿವರ ವರ್ತನೆಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದರು. ‘ಸಚಿವರಿಗೆ ಪುರುಸೊತ್ತು ಇಲ್ಲದಿದ್ದರೆ ಪಕ್ಷದ ಕಾರ್ಯಕ್ರಮಗಳಿಂದ ದೂರ ಇರಲಿ’ ಎಂದು ನೇರವಾಗಿ ಹೇಳಿದರು.
ಕೆಪಿಸಿಸಿ ಪರಿಶಿಷ್ಟ ಜಾತಿಗಳ ವಿಭಾಗವು ಸೋಮವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಮಾತು ಮುಗಿಸಿ ವೇದಿಕೆಯಿಂದ ನಿರ್ಗಮಿಸಿದರು. ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಪೂರ್ವನಿಗದಿತ ಕಾರ್ಯಕ್ರಮಕ್ಕೆ ತೆರಳಿದರು.
ಬಳಿಕ ಮಾತನಾಡಿದ ಪರಮೇಶ್ವರ್, ಸಚಿವರ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು. ‘ಇದು ಒಂದು ಮಹತ್ವದ ಕಾರ್ಯಕ್ರಮ. ಸಚಿವರು ಮಧ್ಯದಲ್ಲೇ ವೇದಿಕೆಯಿಂದ ನಿರ್ಗಮಿಸುವುದನ್ನು ನಾನು ಒಪ್ಪುವುದಿಲ್ಲ. ಅವರಿಗೆ ಇಲ್ಲಿ ಸಮಯ ನೀಡಲು ಆಗದಿದ್ದರೆ, ಪಕ್ಷದ ಕಾರ್ಯಕ್ರಮಗಳಿಂದ ದೂರ ಇರಲಿ. ಬಿಟ್ಟುಬಿಡಿ’ ಎಂದು ಯಾರ ಹೆಸರನ್ನೂ ಪ್ರಸ್ತಾಪಿಸದೆ ಹರಿಹಾಯ್ದರು.
‘ದಲಿತರ ಅಹವಾಲು ಅರಿಯಲು ಎರಡು ಗಂಟೆ ಮೀಸಲಿಡಲು ಸಚಿವರಿಗೆ ಸಾಧ್ಯವಿಲ್ಲವೇ. ನಾವು (ದಲಿತರು) ನಿಮ್ಮ ಮಾತನ್ನು ಕೇಳಲು ಇಲ್ಲಿಗೆ ಬಂದಿಲ್ಲ. ನಮ್ಮ ಅಹವಾಲುಗಳನ್ನು ನಿಮ್ಮ ಮುಂದಿಡಲು ಬಂದಿದ್ದೇವೆ’ ಎಂದು ಸಿಟ್ಟಿನಿಂದ ಹೇಳಿದರು.
ಇಬ್ಬಗೆ ವಾದ: ದಲಿತರಿಗೆ ಮೀಸಲಾತಿ ಒದಗಿಸುವ ಸಂಬಂಧ ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ವ್ಯಕ್ತಪಡಿಸಿದ ವಿಭಿನ್ನ ಅಭಿಪ್ರಾಯಗಳಿಗೂ ವೇದಿಕೆ ಸಾಕ್ಷಿಯಾಯಿತು. ಪರಿಶಿಷ್ಟರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು ಎಂದು ಪ್ರತಿಪಾದಿಸಿದ ಖರ್ಗೆ, ಈ ದಿಸೆಯಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಆದರೆ, ಖರ್ಗೆ ಅವರ ವಾದಕ್ಕೆ ವಿರುದ್ಧವಾಗಿ ಮಾತನಾಡಿದ ಪರಮೇಶ್ವರ್, ‘ದಲಿತರು ಮತಬ್ಯಾಂಕ್ಗಳಾಗಿದ್ದಾರೆ. ನಮಗೆ ಮೀಸಲಾತಿ ಬೇಡ, ನಮ್ಮನ್ನು ಸಶಕ್ತಗೊಳಿಸಿ’ ಎಂದರು.
‘ದಲಿತರಿಗೆ ಖಾಸಗಿ ವಲಯದಲ್ಲೂ ಮೀಸಲಾತಿ ದೊರೆಯಬೇಕು. ಅರ್ಹತೆ ಇರುವವರಿಗೆ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗಳೂ ಲಭಿಸಬೇಕು’ ಎಂದ ಅವರು, ಪ್ರೊ.ಗೋಮತಿ ದೇವಿ ಅವರಿಗೆ ದಾವಣಗೆರೆ ವಿ.ವಿ ಕುಲಪತಿ ಹುದ್ದೆ ಕೈತಪ್ಪಿರುವುದನ್ನು ಪ್ರಸ್ತಾಪಿಸಿದರು.
ಸಚಿವರ ಸಮರ್ಥನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುವಾಗ ಸಚಿವರು ಬೇಗ ನಿರ್ಗಮಿಸಿದ್ದನ್ನು ಸಮರ್ಥಿಸಿಕೊಂಡರು. ಮಹತ್ವದ ಕೆಲಸ ಇರುವುದರಿಂದ ಅವರು ವೇದಿಕೆಯಿಂದ ತೆರಳಿರಬಹುದು ಎಂದರು.
ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಮೀಸಲಾತಿ ಸೌಲಭ್ಯ ಒದಗಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.