ನೆಲಮಂಗಲ: ಶಿವಗಂಗೆಯ ಶೃಂಗೇರಿ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ (59) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಸಂಜೆ ಹೃದಯಾಘಾತದಿಂದ ನಿಧನರಾದರು.
ಅನಾರೋಗ್ಯಕ್ಕೆ ಗುರಿಯಾಗಿದ್ದ ಸ್ವಾಮೀಜಿ ಅವರು, ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶೃಂಗೇರಿ ಶಾಖೆಯ ಶಿವಗಂಗೆ ಮಠದ 5ನೇ ಪೀಠಾಧ್ಯಕ್ಷರಾದ ಶ್ರೀಗಳು ಅಂತರ್ಮುಖಿಗಳಾಗಿದ್ದು ಅನುಷ್ಠಾನ ಯೋಗಿಗಳಾಗಿದ್ದರು. 45 ವರ್ಷಗಳಿಂದ ಶಿವಗಂಗೆಯಲ್ಲಿ ನೆಲೆಸಿದ್ದ ಅವರು ವಿಪ್ರ ಬಾಂಧವರಿಗೆ ಸಂಸ್ಕೃತ ಪಾಠಶಾಲೆ ನಡೆಸುತ್ತಿದ್ದರು.
ಪೂರ್ವಾಶ್ರಮದಲ್ಲಿ ಬಿಎಸ್ಸಿ, ಎಲ್ಎಲ್ಬಿ ಪದವೀಧರರಾದ ಶ್ರೀಗಳು ಪೀಠ ಅಲಂಕರಿಸಿದ ನಂತರ ಸಂಸ್ಕೃತ, ವೇದ ಆಗಮಗಳಲ್ಲಿ ಅಪಾರ ಪಾಂಡಿತ್ಯ ಗಳಿಸಿದ್ದರು. ಭಾನುವಾರ ಬೆಳಿಗ್ಗೆ 10 ಗಂಟೆಗೆ ಶಿವಗಂಗೆಯ ಶಾರದಾ ಪೀಠದ ಆವರಣದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.