ಕಂಪ್ಲಿ: ಇಲ್ಲಿಗೆ ಸಮೀಪದ ಸಣಾಪುರ ಗ್ರಾಮದ ಚಿಕ್ಕೇನಕೊಪ್ಪ ಚನ್ನವೀರ ಶರಣರ ಬಳಗ ಆಶ್ರಯದಲ್ಲಿ ಮೌನತಪಸ್ವಿ ಚನ್ನವೀರ ಶರಣರ 18ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 30ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದವು.
ಸಾನಿಧ್ಯ ವಹಿಸಿದ್ದ ಅಭಿನವಪ್ರಭು ಸ್ವಾಮೀಜಿ ಶುಭ ಹಾರೈಸಿ ಮಾತನಾಡಿ, ನವ ಜೋಡಿಗಳು ಭವಿಷ್ಯದಲ್ಲಿ ಸಾಮರಸ್ಯದಿಂದ ಜೀವನ ನಡೆಸಿ, ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಬೇಕು ಎಂದರು.
ಹೆಬ್ಬಾಳು ನಾಗಭೂಷಣ ಶಿವಾಚಾರ್ಯರು ಆಶೀರ್ವಚನ ನೀಡಿ, ಸಾಮೂಹಿಕ ವಿವಾಹಗಳು ಆರ್ಥಿಕವಾಗಿ ಹಿಂದುಳಿದವರಿಗೆ ವರದಾನ ಎಂದರು. ಎಲ್ಲರೂ ದಾನ, ಧರ್ಮ, ಪರೋಪಕಾರ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮುಸ್ಟೂರು ಈಶಣ್ಣ ತಾತನವರು, ವದ್ದಿಗೇರಿ ವೀರನಗೌಡ ತಾತ, ಮಠದ ವೀರಯ್ಯತಾತ, ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಪಿ. ಮೂಕಯ್ಯಸ್ವಾಮಿ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್. ಸ್ವಾಮಿ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಕೆ.ಎಂ. ಹಾಲಪ್ಪ, ಜೆಡಿಎಸ್ ಮುಖಂಡ ಎಚ್. ಶಿವಶಂಕರಗೌಡ, ಪುರಸಭೆ ಮಾಜಿ ಅಧ್ಯಕ್ಷ ಅಯೋದಿ ವೆಂಕಟೇಶ್, ಇಟಗಿ ಬಸವರಾಜಗೌಡ, ಜವಳಿ ಚನ್ನಬಸಪ್ಪ, ಚಿಕ್ಕೇನಕೊಪ್ಪದ ಚನ್ನವೀರಶರಣರ ಬಳಗದ ಪದಾಧಿಕಾರಿಗಳು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಉದ್ಭವ ವೀರಭದ್ರೇಶ್ವರ ದೇವರಿಗೆ ರುದ್ರಾಭಿಷೇಕ, ಗಣೇಶ, ಭದ್ರಕಾಳಿ, ಈಶ್ವರ, ನಂದಿ, ಆಂಜನೇಯ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಚಿಕ್ಕೇನಕೊಪ್ಪದ ಚನ್ನವೀರಶರಣರ ಭಾವಚಿತ್ರ ಮೆರವಣಿಗೆಯು ಜರುಗಿತು.