ಆಲಮಟ್ಟಿ: ಕೃಷ್ಣೆಯ ಹಿನ್ನೀರು ಖಾಲಿಯಾಗತೊಡಗಿದ್ದು, ನೀರಿನ ಕೊರತೆ ಹಾಗೂ ಬೇಸಿಗೆ ಬಿಸಲಿನ ಪ್ರಖರತೆಯಿಂದಾಗಿ ಕೃಷ್ಣಾ ನದಿ ದಂಡೆಯಲ್ಲಿ ಸಹಸ್ರಾರು ಸಣ್ಣ ಮೀನುಗಳು ಸತ್ತು ಬಿದ್ದಿರುವ ದೃಶ್ಯ ಕಂಡುಬರುತ್ತಿದೆ.
ಮಾರ್ಚ್ ಅಂತ್ಯಕ್ಕೆ ಜಲಾಶಯಕ್ಕೆ ನೀರಿನ ಕೊರತೆ ಉಂಟಾಗಿದ್ದು, ಬಿಸಿಲಿನ ಝಳಕ್ಕೆ ಹಾಗೂ ಆಮ್ಲಜನಕದ ಕೊರತೆಯಿಂದ ಮೀನುಗಳ ಮಾರಣ ಹೋಮವೇ ನಡೆಯುತ್ತಿದೆ.
ಪ್ರತಿನಿತ್ಯವೂ ಆಲಮಟ್ಟಿ ಜಲಾಶಯದ ಹಿನ್ನೀರಿನ ಕೃಷ್ಣಾ ನದಿ ಎರಡು ದಂಡೆಯಲ್ಲಿ ಸಾಲಾಗಿ ಚಿಕ್ಕ ಚಿಕ್ಕ ಮೀನುಗಳು ಸತ್ತಿವೆ. ಕೆಲವೆಡೆ ದೊಡ್ಡ ಮೀನುಗಳೂ ಸತ್ತು ಬಿದ್ದಿರುವ ದೃಶ್ಯಗಳು ಕಾಣುತ್ತಿವೆ. ಈ ಬಾರಿ ಬೇಸಿಗೆಯ ಕರಾಳ ಹಸ್ತ ಪ್ರಾರಂಭವಾಗಿದ್ದು, ರಾಶಿ, ರಾಶಿಯಾಗಿ ಸತ್ತ ಮೀನುಗಳ ಕೆಟ್ಟ ವಾಸನೆ ಹಾಗೂ ಅವುಗಳನ್ನು ತಿನ್ನಲು ಬರುವ ಪಕ್ಷಿಗಳು, ಹಾರಾಡುತ್ತಿರುವ ಪಕ್ಷಿಗಳು ಎಲ್ಲೆಡೆಯೂ ಕಂಡು ಬರುತ್ತಿದೆ. ನಾಯಿ ಸೇರಿದಂತೆ ಇನ್ನಿತರ ಪ್ರಾಣಿಗಳು ಹೆಚ್ಚಾಗಿ ಇಲ್ಲಿಯೇ ಠಿಕಾಣಿ ಹೂಡಿವೆ.
ಪಕ್ಷಿಗಳಿಗೆ ಭೂರಿ ಭೋಜನ: ಇತ್ತ ಮೀನುಗಳ ಸಾಯುತ್ತಿದ್ದರೇ, ಅತ್ತ ನದಿಯಲ್ಲಿನ ಸತ್ತು ಮೀನುಗಳನ್ನು ತಿನ್ನಲು ಸಾವಿರಾರು ಪಕ್ಷಿಗಳು ಆಕಾಶದಲ್ಲಿ ಹಾರಾಡುತ್ತಾ, ಸದ್ದು ಮಾಡುತ್ತಾ ಭೂರಿ ಭೋಜನ ಸಿಕ್ಕ ಸಂತಸದಲ್ಲಿ ಹಾರಾಡುತ್ತಿವೆ. ದಡದಲ್ಲಿ ನಿಂತು ಆಕಾಶದ ಕಡೆ ನೋಡಿದರೆ ನೆಲದತ್ತ ಗುರಿಯಿಟ್ಟ ಹುಡುಕುತ್ತಿರುವ ಹಕ್ಕಿಗಳ ಹಾರಾಟ ಕಾಣುತ್ತದೆ.