ಶೃಂಗೇರಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ತುಂಗಾ ನದಿ ತುಂಬಿ ಹರಿಯುತ್ತಿದ್ದು, ಮಳೆ ಪ್ರಮಾಣ ಸ್ವಲ್ಪ ಹೆಚ್ಚು ಕಡಿಮೆ ಆದ ಸಂದರ್ಭದಲ್ಲಿ ಪ್ರವಾಹದ ಏರಿಳಿತ ಉಂಟಾಗುತ್ತಿದೆ.
ಗುರುವಾರ ರಾತ್ರಿ ರಭಸದಿಂದ ಮಳೆ ಸುರಿದ ಪರಿಣಾಮ ಶೃಂಗೇರಿ-ಮಂಗಳೂರು ರಸ್ತೆಯ ಕೆರೆಕಟ್ಟೆ ಸಮೀಪ ತುಂಗಾ ನದಿ ರಸ್ತೆಯ ಮೇಲೆ ಹರಿದ ಕಾರಣ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪಟ್ಟಣದ ಕೆ.ವಿ.ಆರ್. ರಸ್ತೆ ಸಹ ಜಲಾವೃತಗೊಂಡಿತ್ತು. ಇದರೊಂದಿಗೆ ಸತತ ಗಾಳಿ ಮಳೆಯಿಂದಾಗಿ ಕೆರೆಕಟ್ಟೆ ರಸ್ತೆಯಲ್ಲಿ ಆಗಾಗ ಮರಗಳು ರಸ್ತೆಗೆ ಅಡ್ಡಲಾಗಿ ಬೀಳುತ್ತಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ.
ಮಳೆ ಬಹುಬೇಗ ಆರಂಭವಾಗಬಹುದು ಎಂಬ ನಿರೀಕ್ಷೆಯಲ್ಲಿ ಜೂನ್ ಮೊದಲ ವಾರದಲ್ಲೇ ಅಡಿಕೆ ಕೊಳೆ ರೋಗ ತಡೆಗಟ್ಟಲು ಮುಂಜಾಗ್ರತೆಯಾಗಿ ತೋಟದಲ್ಲಿ ಸಿಂಪಡಿಸಿದ್ದ ಬೋರ್ಡೊ ಹಾಗೂ ಜೈವಿಕ ಶಿಲೀಂದ್ರ ನಾಶಕಗಳಿಗೆ ಅವಧಿ ಮುಗಿದಿದ್ದು, ಎರಡನೇ ಬಾರಿಗೆ ಔಷಧಿ ಸಿಂಪಡಿಸಲು ಸತತವಾಗಿ ಸುರಿಯು ತ್ತಿರುವ ಮಳೆ ಅಡ್ಡಿಯುಂಟು ಮಾಡುತ್ತಿದೆ. ದರಿಂದ ಅಡಿಕೆ ತೋಟದಲ್ಲಿ ಕೊಳೆ ರೋಗ ಹೆಚ್ಚಾಗಿದ್ದು, ಅಡಿಕೆಯ ಚಿಗುರು ಕಾಯಿಗಳು ಮರದಿಂದ ಉದುರುತ್ತಿರುವ ಕಾರಣ ಮಳೆಗಾಲದ ಆರಂಭದಲ್ಲಿ ಹದ ಮಳೆಯಾದಾಗ ಉತ್ತಮ ಇಳುವರಿ ನಿರೀಕ್ಷೆ ಯಲ್ಲಿದ್ದ ರೈತರಿಗೆ ನಿರಾಸೆ ಉಂಟಾಗುತ್ತಿದೆ. ರೈತರಿಗೆ ಬೆಳೆ ಉಳಿಸಿಕೊಳ್ಳುವ ಸಲುವಾಗಿ ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸಲು ಮಳೆ ಬಿಡುವುದನ್ನೇ ಕಾಯುವಂತಾಗಿದೆ.