ಸಂಡೂರು: ಮಾನವ ಜನ್ಮ ದೊಡ್ಡದು. ಸಮಾಜದ ಸೇವೆ, ಸದ್ವಿಚಾರ, ಸತ್ಕಾರ್ಯಗಳ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕು ಎಂದು ವಿರಕ್ತಮಠದ ಪ್ರಭುಸ್ವಾಮೀಜಿ ಹೇಳಿದರು.
ಅವರು ಪಟ್ಟಣದ ಕಪ್ಪಲಕುಂಟೆಯ ಕರಿಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಅತ್ತೆ, ಮಾವ, ತಂದೆ, ತಾಯಿ ಹಾಗೂ ಹಿರಿಯರನ್ನು ಗೌರವದಿಂದ ಕಂಡು ಇಳಿ ವಯಸ್ಸಿನಲ್ಲಿ ಅವರ ಬದುಕಿಗೆ ನೆರವಾಗಿ ಎಂದು ನೂತನ ವಧು-ವರರಿಗೆ ವಿರಕ್ತ ಮಠದ ಪ್ರಭುಸ್ವಾಮೀಜಿ ಸಲಹೆ ನೀಡಿದರು.
ಇತರ ದೇಶಗಳಿಗಿಂತ ಭಾರತೀಯರ ಮದುವೆಗೆ ವಿಶೇಷವಾದ ಘನತೆ, ಉನ್ನತ ಸ್ಥಾನ, ಉತ್ತಮ ಸಂಸ್ಕೃತಿ ಇದೆ. ಎರಡು ಹೃದಯಗಳ, ಮನಸ್ಸುಗಳ ಬೆಸುಗೆ ಗಟ್ಟಿಯಾಗಲು, ಸಂಸಾರದ ಬಂಡಿ ಸುಗಮವಾಗಿ ಸಾಗಲು ಸತಿ-ಪತಿಗಳಿಬ್ಬರು ಎರಡು ಚಕ್ರಗಳಂತೆ ಸಮನಾಗಿದ್ದು, ಒಬ್ಬರನ್ನೊಬ್ಬರು ಅರಿತು ಕೊಂಡು ಬಾಳಿದಾಗ ಮಾತ್ರ ಸಂಸಾರದಲ್ಲಿ ನೆಮ್ಮದಿ ಕಾಣಲು ಸಾಧ್ಯ. ವೈಯಕ್ತಿಕ ಹಿತಾಸಕ್ತಿಯನ್ನು ಬಿಟ್ಟು, ದುಶ್ಚಟಗಳಿಗೆ ಬಲಿಯಾಗದೆ ಉತ್ತಮವಾಗಿ ಬಾಳಿ, ಬದುಕು ಸಮಾಜಕ್ಕೆ ಮಾದರಿಯಾಗಬೇಕು ಎಂದು ನುಡಿದರು.
ಉತ್ತಂಗಿ ಸಂಸ್ಥಾನ ಮಠದ ಶಂಕರ ಸ್ವಾಮೀಜಿ ಮಾತನಾಡಿದರು. ಕರಿಬಸವೇಶ್ವರ ದೇವಸಥಾನ ಸಮಿತಿಯ ಅಧ್ಯಕ್ಷ ಕೆ. ನಿಂಗಪ್ಪ, ಮುಖ್ಯ ಕಾರ್ಯದರ್ಶಿ ಭಜನಿ ಶಂಕ್ರಪ್ಪ, ಕುಮಾರಸ್ವಾಮಿ, ಶಿವಾಜಿರಾವ್ ಇಂಗಳೆ, ಅಬ್ದುಲ್ ಬಾಕೈ, ಆರ್. ಸ್ವಾಮಿ, ಹನುಮಕ್ಕ ನಿಂಗಪ್ಪ ಉಪಸ್ಥಿತರಿದ್ದರು.