ಜಯಪುರ (ಬಾಳೆಹೊನ್ನೂರು): ಇಲ್ಲಿಗೆ ಸಮೀಪದ ಜಯಪುರ–ಶೃಂಗೇರಿ ರಸ್ತೆಯ ಗಡಿಕಲ್ಲು ಗ್ರಾಮದ ಸತ್ತಿಕಲ್ಲಿನ ವಾಸುದೇವ ಅವರ ಮನೆಯಂಗಳದಲ್ಲಿ ದಿ.ಸಿಂಗಪ್ಪಯ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಸುಧನ್ವ ಮೋಕ್ಷ ತಾಳಮದ್ದಳೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ನಿಷ್ಣಾತರಾಗಿದ್ದ ಗ್ರಾಮದ ಹಿರಿಯ ಚೇತನ ಸಿಂಗಪ್ಪಯ್ಯ ಯಕ್ಷಗಾನ ಪೋಷಕರಾಗಿದ್ದು, ಅವರ ನೆನಪಿಗಾಗಿ ಸ್ಥಳೀಯ ಖ್ಯಾತ ಕಲಾವಿದರು ಹಾಗೂ ಆಹ್ವಾನಿತ ಕಲಾವಿದರನ್ನು ಕರೆಸಿ ಪ್ರಸ್ತುತಪಡಿಸಿದ ಸುಧನ್ವ ಮೋಕ್ಷ ತಾಳಮದ್ದಳೆ ಪ್ರದರ್ಶನ ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.
ಸನ್ಮಾನ: ಯಕ್ಷಗಾನ ಕ್ಷೇತ್ರದ ಗಾನಕೋಗಿಲೆ ಸುಬ್ರಹ್ಮಣ್ಯ ಧಾರೇಶ್ವರ, ಹಿರಿಯ ಮದ್ದಳೆಗಾರ ಯಲ್ಲಾಪುರ ಶಂಕರ ಭಾಗವತ್, ಉಜಿರೆ ಅಶೋಕಭಟ್, ಎಂ.ಪ್ರಭಾಕರಜೋಷಿ, ಮಲೆನಾಡು ಭಾಗದ ಕಲಾವಿದ ತೋಟದೂರು ಟಿ.ವಿ.ಅಜಿತ್ಕಾರಂತ್, ಜನಾರ್ಧನ ಮಂಡಗಾರು, ಮದ್ದಳೆ ವಾದಕ ಭಾಗವತರ ಮನೆ ವೆಂಕಟೇಶ್್್ ಭಟ್, ಉದಯೋನ್ಮುಖ ಭಾಗವತ ಹೇರೂರಿನ ಎ.ಜಿ.ಶಿವಾನಂದಭಟ್ ಹಾಗೂ ಸ್ಥಳೀಯ ಗಣ್ಯರನ್ನು ವಾಸುದೇವ್ ಕುಟುಂಬ ಸದಸ್ಯರು ಅರ್ಥಪೂರ್ಣವಾಗಿ ಸನ್ಮಾನಿಸಿದರು.
ಮಲೆನಾಡಿನ ಖ್ಯಾತ ಭಾಗವತ ಮತ್ವಾನಿ ಶಿವಶಂಕರ್, ಮದ್ದಳೆಗಾರರಾದ ಭಾಗವತರ ಮನೆ ವೆಂಕಟೇಶ್ಭಟ್, ಹುಲುಗಾರು ಗಣೇಶಮೂರ್ತಿ, ಜಯಪುರ ಹಂಸನಾದ ಯಕ್ಷಬಳಗದ ಕಲಾವಿದ ಮೂತೊಳ್ಳಿ ಎಂ.ಎಸ್.ಸುಬ್ರಹ್ಮಣ್ಯ, ಶೃಂಗೇರಿ ನಾಗೇಶ್ ಕಾಮತ್, ಮಂಡಗಾರು ನರಸಿಂಹಮೂರ್ತಿ, ಯಕ್ಷಗಾನ ಪೋಷಕರಾದ ಜಯಪುರದ ಜಗದೀಶ್ ಹೆಬ್ಬಾರ್, ಚಂದ್ರಕಾಂತ್ ಶೇಟ್, ಕುಂದೂರು ಕೆ.ಆರ್.ಸುಬ್ರಹ್ಮಣ್ಯ, ದೂಬ್ಳ ಅಭ್ಯುದಯ ಸ್ವ ಸಹಾಯ ಸಂಘದ ಭಾಸ್ಕರರಾವ್, ಕಾಫಿ ಬೆಳೆಗಾರ ಬಾಳಮನೆ ನಟರಾಜ್, ಜಯಪುರ ಸತ್ಯಸಾಯಿ ಸಂಸ್ಥೆಯ ಶಿಕ್ಷಕ ಅಭಿನಂದನ್, ಯತೀಶ್ಶೆಟ್ಟಿ ಇದ್ದರು.