ಹೈದರಾಬಾದ್ (ಪಿಟಿಐ): ನಾಲ್ಕು ವರ್ಷಗಳ ಹಿಂದಿನ `ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್ ಲಿ.~(ಎಸ್ಸಿಎಸ್ಎಲ್) ವಂಚನೆ ಪ್ರಕರಣದ ಆರೋಪಿ, ಕಂಪೆನಿಯ ಅಂದಿನ ಅಧ್ಯಕ್ಷ ರಾಮಲಿಂಗ ರಾಜು ಅವರಿಗೆ ಸೇರಿದ ರೂ.822 ಕೋಟಿ ಮೊತ್ತದ ಬ್ಯಾಂಕ್ ಠೇವಣಿಗಳನ್ನು ಜಾರಿ ನಿರ್ದೇಶನಾಲಯ ಗುರುವಾರ ಸ್ಥಗಿತಗೊಳಿಸಿ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
`ಎಸ್ಸಿಎಸ್ಎಲ್~ ಮೂಲಕ ರಾಮಲಿಂಗರಾಜು ಕುಟುಂಬ ರೂ.2171.45 ಕೋಟಿ ವಂಚನೆ ಎಸಗಿರುವುದು ಪತ್ತೆಯಾಗಿದೆ. ಆಂಧ್ರ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಐಡಿಬಿಐ ಮತ್ತು ಐಎನ್ಜಿ ವೈಶ್ಯ ಬ್ಯಾಂಕ್ನಲ್ಲಿ `ಎಸ್ಸಿಎಸ್ಎಲ್~ ಹೆಸರಿನಲ್ಲಿದ್ದ ರೂ. 822 ಕೋಟಿ ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಲಾಗಿದೆ. `ಹಣ ದ್ವಿಗುಣ ತಡೆ ಕಾಯ್ದೆ~(ಪಿಎಂಎಲ್ಎ)ಯಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಹೈದರಾಬಾದ್ ವಲಯ ಕಚೇರಿ ಗುರುವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಕಂಪೆನಿಯ ಲೆಕ್ಕಪತ್ರಗಳನ್ನು ಹಲವು ವರ್ಷಗಳ ಕಾಲ ಬದಲಿಸುತ್ತಾ, ಭಾರಿ ಪ್ರಮಾಣದ ಪ್ರಗತಿಯಾಗುತ್ತಿದೆ ಎಂದು ರಾಮಲಿಂಗ ರಾಜು ಬಿಂಬಿಸುತ್ತಿದ್ದರು. ಆ ಮೂಲಕ ಕಂಪೆನಿಯ ಷೇರು ಮೌಲ್ಯ ಅಸಹಜ ರೀತಿ ಹೆಚ್ಚುವಂತೆ ಮಾಡಿ ಷೇರುಪೇಟೆಯಿಂದ ಭಾರಿ ಹೂಡಿಕೆ ಹರಿದುಬರುವಂತೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದ್ದು, ತನಿಖೆ ಮುಂದುವರಿದಿದೆ.
ವಂಚನೆ ಪ್ರಕರಣ ಬಯಲಿಗೆ ಬಂದ ನಂತರ ಸತ್ಯಂ ಕಂಪ್ಯೂಟರ್ಸ್ ಕಂಪೆನಿಯನ್ನು `ಟೆಕ್ ಮಹೀಂದ್ರಾ~ ಖರೀದಿಸಿ, ಮಹೀಂದ್ರಾ ಸತ್ಯಂ ಎಂದು ಮರುನಾಮಕರಣ ಮಾಡಿದ್ದಿತು.
ಜಾರಿ ನಿರ್ದೇಶನಾಲಯ ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಿರುವ ಬಗ್ಗೆ ಸುದ್ದಿಗಾರರ ಪ್ರಶ್ನಿಸಿದಾಗ ಮಹೀಂದ್ರಾ ಸತ್ಯಂನ ಅಧಿಕೃತ ವಕ್ತಾರರು ಪ್ರತಿಕ್ರಿಯಿಸಲು ನಿರಾಕರಿಸಿದರು.