ಜಮಖಂಡಿ: `ಸಾಹಿತ್ಯ ಲೋಕಕ್ಕೆ ಸತ್ಯಕಾಮರ ಕೃತಿಗಳು ನಿಧಿ ಇದ್ದ ಹಾಗೆ. ಅವರ ಕೃತಿಗಳನ್ನು ಮೊದಲ ಬಾರಿಗೆ ಓದಿದಾಗ ಏನೂ ಅರ್ಥವಾಗುವುದಿಲ್ಲ. ಆದರೆ ನಿಧಾನವಾಗಿ ಅನುಭವಿಸುತ್ತ ಹೋದಂತೆ ಸತ್ಯಕಾಮರ ಪರಿಚಯ ಆಗುತ್ತದೆ~ ಎಂದು ಚಲನಚಿತ್ರ ನಟ ಶಿವರಾಂ ಅಭಿಪ್ರಾಯಪಟ್ಟರು.
ಸತ್ಯಕಾಮ ಪ್ರತಿಷ್ಠಾನ ಕಲ್ಲಹಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಸತ್ಯಕಾಮರ ತೋಟದ ಮನೆ `ಸುಮ್ಮನೆ~ ಅಂಗಳದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ಸತ್ಯಕಾಮರ 14ನೇ ಆರಾಧನೆ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಸತ್ಯಕಾಮರ ಮಾತುಗಳು ಕೂಡ ಒರಟು ಮತ್ತು ಒಗಟು. ಹಾಗಾಗಿ ಸತ್ಯಕಾಮರು ಒಬ್ಬ ಅವಧೂತ ಎನಿಸಿಕೊಂಡಿದ್ದರು. ಅವರಿಗೆ ತಮ್ಮದೇ ಆದ ವೇಷಭೂಷಣ ಇರಲಿಲ್ಲ. ಆಡಂಬರ ಇರಲಿಲ್ಲ. ಸರಳ ಮತ್ತು ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ಅವರ ಸಾಹಿತ್ಯವನ್ನು ಶಾಲಾ-ಕಾಲೇಜು ಪಠ್ಯದಲ್ಲಿ ಸೇರಿಸಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು~ ಎಂದರು.
ಸಾಹಿತಿ ಗುರುರಾಜ ಮಾರ್ಪಳ್ಳಿ ಮಾತನಾಡಿ, ಶರಣರ ಗುಣಗಳನ್ನು ಸತ್ಯಕಾಮರಲ್ಲಿ ಕಾಣುತ್ತೇವೆ. ಅವರ ಸೂಕ್ಷ್ಮತೆಗಳು ವಿಮರ್ಶೆಯ ಪರಿದಿ ಮೀರಿದ್ದವು. ಅವರು ಅನೇಕ ಚಿಂತಕರನ್ನು ಹುಟ್ಟು ಹಾಕ್ದ್ದಿದರು~ ಎಂದರು.
ಅಸಾದುಲ್ಲಾ ಬೇಗ್, ಮೈಸೂರು ಆನಂದ್, ಎಂ.ಡಿ. ಕೌಶಿಕ್, ರಿಚರ್ಡ್ ಲೂಯಿಸ್, ವಿಧಾನಸಭೆ ಮಾಜಿ ಅಧ್ಯಕ್ಷ ಬಿ.ಎಲ್. ಶಂಕರ, ವಿಧಾನ ಪರಿಷತ್ ಸದಸ್ಯ ಜಿ.ಎಸ್. ನ್ಯಾಮಗೌಡ, ವಾಸಣ್ಣ ದೇಸಾಯಿ, ಹಬ್ಬು ಹಾಜರಿದ್ದರು. ಸತ್ಯಕಾಮ ಪ್ರತಿಷ್ಠಾನ ಕಾರ್ಯದರ್ಶಿ ಡಾ.ವೀಣಾ ಬನ್ನಂಜೆ ಸ್ವಾಗತಿಸಿ, ರಘುರಾಮ ಭಟ್ ನಿರೂಪಿಸಿದರು. ಆರ್.ಪಿ. ನ್ಯಾಮಗೌಡ ವಂದಿಸಿದರು.